ಮಾ.8: ಬ್ಯಾರಿ ಅಕಾಡಮಿಯಿಂದ ಮಹಿಳಾ ದಿನಾಚರಣೆ
ಮಂಗಳೂರು, ಮಾ.6: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಾ.8ರಂದು ಮಧ್ಯಾಹ್ನ 2:30ಕ್ಕೆ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಲಿದೆ.
ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಪರಾಹ್ನ 3 ಗಂಟೆಗೆ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫ್ಶಾನ್ ವಹಿಸಲಿದ್ದು, ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರೊಹರಾ ಅಬ್ಬಾಸ್ ‘ಪೆಣ್ಣ್ಗುಂ ಉಂಡು ಹಕ್ಕ್’ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸುವರು.ಪತ್ರಕರ್ತೆ ಡಾ. ಸೀತಾ ಲಕ್ಷ್ಮಿಕರ್ಕಿಕೋಡಿ, ನ್ಯಾಷನಲ್ ವುಮೆನ್ಸ್ ಫ್ರಂಟ್ನ ರಾಜ್ಯ ಸಮಿತಿ ಸದಸ್ಯೆ ಫಾತಿಮಾ ನಸೀಮಾ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಸಲಹೆಗಾರ್ತಿ ಮುಮ್ತಾಝ್ ಪಕ್ಕಲಡ್ಕ ಅತಿಥಿಗಳಾಗಿ ಭಾಗವಹಿಸುವರು.
ಸಂಜೆ 4 ಗಂಟೆಗೆ ಸಾಧಕರಿಗೆ ಸನ್ಮಾನ, 4:15ಕ್ಕೆ ಮಿಸ್ರಿಯಾ ಐ ಪಜೀರ್ ಅಧ್ಯಕ್ಷತೆಯಲ್ಲಿ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಸಲ್ಮಾ (ಬ್ಯಾರಿ), ಝುಲೇಖಾ ಮಮ್ತಾಝ್ (ಬ್ಯಾರಿ), ಶಿಫಾ ಕೆ.ಎಂ. (ಕನ್ನಡ), ಫೆಲ್ಸಿ ಲೋಬೋ (ಕೊಂಕಣಿ), ಸುಮಯ್ಯಿ ಬಾನು (ಬ್ಯಾರಿ), ಮಂಜುಳಾ (ತುಳು), ಸಾಜಿದಾ ಮೂಮಿನ್ (ಉರ್ದು) ಕವನ ವಾಚಿಸುವರು. ಅಲ್ಲದೆ ಅಕಾಡಮಿ ಏರ್ಪಡಿಸಿದ ರಾಜ್ಯಮಟ್ಟದ ಬ್ಯಾರಿ ಪ್ರಬಂಧ ಮತ್ತು ಕಥಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.