ಕಲಿಯುವಿಕೆ ಕೇವಲ ಅಧ್ಯಾಪಕರಿಗೆ - ಮಕ್ಕಳಿಗೆ ಸಂಬಂಧಿಸಿದ್ದಲ್ಲ: ಉಂಡಾರು ಶ್ರೀನಿವಾಸ ಭಟ್
ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಮಾವೇಶ
ಉಳ್ಳಾಲ: ಕಲಿಯುವಿಕೆ ಕೇವಲ ಅಧ್ಯಾಪಕರಿಗೆ ಮತ್ತು ಮಕ್ಕಳಿಗೆ ಸಂಬಂಧಿಸಿದ್ದಲ್ಲ. ಅವರ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವುದು ಅತೀ ಮುಖ್ಯ ಎಂದು ಉಂಡಾರು ಶ್ರೀನಿವಾಸ ಭಟ್ ಅಭಿಪ್ರಾಯಪಟ್ಟರು.
ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಮಾವೇಶ ಹಾಗೂ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಮೂಡಿಸುವುದರ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಶಾಲಾ ಚಟುವಟಿಕೆಗಳ ಬಗ್ಗೆ ಉಪನ್ಯಾಸಕರೊಂದಿಗೆ ಚರ್ಚಿಸಿದಾಗ ಮಕ್ಕಳ ಶಿಕ್ಷಣದ ವಿಚಾರ ಅರಿಯಲು ಸಾಧ್ಯ ಈ ನಿಟ್ಟಿನಲ್ಲಿ ಮಕ್ಕಳನ್ನು ಕೇವಲ ಕಾಲೇಜಿಗೆ ಕಳುಹಿಸುವುದು ಮಾತ್ರ ಜವಾಬ್ದಾರಿ ಅಲ್ಲ ಅವರ ದೈನಂದಿನ ಚಟುವಟಿಕೆಗಳ ಮೇಲು ಹೆತ್ತವರು ನಿಗಾ ಇಡುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ವಹಿಸಿದ್ದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಸಲಹೆಗಾರ ಡಾ. ಶಿವರಾಮ್ ಪಿ., ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ಪ್ರೊ. ಶೇಷಪ್ಪ ಅಮೀನ್, ಉಪನ್ಯಾಸಕರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.
ಶಿಕ್ಷಕ ರಕ್ಷಕ ಸಂಘದ ಸಂಚಾಲಕ ಡಾ. ಪ್ರಕಾಶ್ ಚಂದ್ರ ಶಿಶಿಲ ಸ್ವಾಗತಿಸಿದರು. ವಿದ್ಯಾರ್ಥಿ ವಿನೀತ್ ವಂದಿಸಿದರು. ಪ್ರಾಧ್ಯಾಪಕಿ ಡಾ. ನಾಗವೇಣಿ ಮಂಚಿ ಕಾರ್ಯಕ್ರಮ ನಿರ್ವಹಿಸಿದರು.