ಕ್ರಿಕೆಟ್ ಬೆಟ್ಟಿಂಗ್: ಓರ್ವನ ಸೆರೆ, ನಗದು ವಶ
ಕಾರ್ಕಳ, ಎ.10: ಕಾರ್ಕಳ ಬೈಪಾಸ್ ರಸ್ತೆಯ ಹೆಗ್ಡೆ ಲಂಚ್ ಹೋಮ್ ಬಳಿ ಎ.9ರಂದು ಸಂಜೆ ವೇಳೆ ಕ್ರಿಕೆಟ್ ಬೆಟ್ಟಿಂಗ್ ಆಟ ನಡೆಸುತ್ತಿದ್ದ ಓರ್ವನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರದ ಎಂ.ಸಿ.ಶೇಖರಪ್ಪ ಬಂಧಿತ ಆರೋಪಿ. ದಾಳಿ ವೇಳೆ ಸ್ಥಳದಲ್ಲಿದ್ದ ವಿಶ್ವನಾಥ, ಸಂತೋಷ ಟಿಂಬರ್, ಟೋನಿ, ಇಕ್ಬಾಲ್ ಬಜಗೋಳಿ, ಭಾಸ್ಕರ ಜಾರ್ಕಳ, ಮುರುಳಿ ಜೋಡುರಸ್ತೆ, ಹುಸೇನ್ ಜೋಡು ರಸ್ತೆ, ಶಾಂತರಾಮ ಸಾಣೂರು ಎಂಬಾತ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಂ.ಸಿ.ಶೇಖರಪ್ಪ ಎ.9ರಂದು ನಡೆಯುವ ಚೆನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ರೈಡರ್ಸ್ ತಂಡದ ಮೇಲೆ ಸಾರ್ವಜನಿಕರಿಂದ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಹಣವನ್ನು ಪಣವಾಗಿ ಪಡೆಯುತ್ತಿದ್ದನು. ಈ ಆಟವನ್ನು ಮಂಗಳೂರಿನ ಮೆಲ್ವಿನ್ ವಿಶ್ವಾಸ್ ಎಂಬಾತನು ನಡೆಸುತ್ತಿರುವುದಾಗಿ ವಿಚಾರಣೆ ಯಿಂದ ತಿಳಿದುಬಂದಿದೆ.
ಬಂಧಿತನಿಂದ 30,100ರೂ. ನಗದು, ಡೈರಿ, ಮೊಬೈಲ್ ಹಾಗೂ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದಾಳಿಯನ್ನು ಕಾರ್ಕಳ ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ನಡೆಸಲಾಗಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.