ಕೃಷಿಕ ಶ್ಯಾಮ್ಪ್ರಸಾದ್ ಭಟ್ಗೆ ‘ಭಾವನಾ ಪುರಸ್ಕಾರ’ ಪ್ರದಾನ
ಉಡುಪಿ, ಎ.22: ಹಾವಂಜೆ ಭಾವನಾ ಫೌಂಡೇಶನ್ ವತಿಯಿಂದ ರವಿ ವಾರ ನಡೆದ ಆರನೆ ವರ್ಷದ ಬಾಲ ಲೀಲಾ-2019 ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ಯಾಮ್ ಪ್ರಸಾದ್ ಭಟ್ಗೆ ಭಾವನಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ಯಾಮ್ ಪ್ರಸಾದ್, ತಾವು ಪರಿಸರದ ಉಳಿವಿಗಾಗಿ ಏನಾದರೂ ಮಾಡಬೇಕೆಂಬ ಹಂಬಲದಿಂದ ಪ್ರಾರಂಭಿಸಿದ ಅನ್ನಪೂರ್ಣ ನರ್ಸರಿ ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಸಂಪತ್ತನ್ನು ಉಳಿಸಲು ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಬೀಯಿಂಗ್ ಸೋಶಿಯಲ್ ಸಂಸ್ಥೆಯ ನಿರ್ವಾಹಕ ಅವಿನಾಶ್ ಕಾಮತ್ ಮಾತನಾಡಿ, ಬಹಳಷ್ಟು ಸಂಸ್ಥೆಗಳು ಹಣ ಮಾಡುವ ಉದ್ದೇಶದಿಂದ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿದೆ. ಆದರೆ ಈ ಸಂಸ್ಥೆ ಮಕ್ಕಳಿಗೆ ಬೇಕಾಗಿ ವಿನೂತನ ರೀತಿಯಲ್ಲಿ ಗ್ರಾಮೀಣತೆಯ ಸೊಗಡಿನೊಂದಿಗೆ ಮಾಡುತ್ತಿುವ ಪ್ರಯತ್ನ ಶ್ಲಾಘನೀಯ ಎಂದರು.
ಕೋಟೆ ಗ್ರಾಪಂ ಅಧ್ಯಕ್ಷೆ ಕೃತಿಕಾ ರಾವ್, ಹಾವಂಜೆ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುಂದರ ಕೋಟ್ಯಾನ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ನಿರ್ದೇಶಕ ಹಾವಂಜೆ ಮಂಜುನಾಥ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರ ನಿರ್ದೇಶಕ ಜನಾರ್ದನ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ವಿ.ರಾವ್ ಸನ್ಮಾನಪತ್ರ ವಾಚಿಸಿದರು. ವಿಶುರಾವ್ ಹಾವಂಜೆ ವಂದಿಸಿದರು.