ಅಂಗನವಾಡಿಗಳ ಸಬಲೀಕರಣ ಅಗತ್ಯ: ಚಂದ್ರಹಾಸ ದೇವಾಡಿಗ
ಅಜೆಕಾರು, ಮೇ 12: ಅಂಗನವಾಡಿಗಳ ಸಬಲೀಕರಣ ಮತ್ತು ಅಲ್ಲಿನ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ವಾತಾವರಣ ಕಲ್ಪಿಸುವುದು ಇಂದಿನ ಅತ್ಯವಶ್ಯಕ ಕೆಲಸವಾಗಿದೆ ಎಂದು ಮೂಡುಬಿದಿರೆ ತುಳು ಕೂಟದ ಅಧ್ಯಕ್ಷ ಎಂ.ಚಂದ್ರಹಾಸ ದೇವಾಡಿಗ ಹೇಳಿದ್ದಾರೆ.
ಅಜೆಕಾರಿನ ರಾಮ ಮಂದಿರದಲ್ಲಿ ಶುಕ್ರವಾರ ನಡೆದ ಕುರ್ಸುಕಟ್ಟೆ ಅಂಗನ ವಾಡಿ ಉತ್ಸವ ಕಾರ್ಯಕ್ರಮವನ್ನು ಅಂಗನವಾಡಿ ಮಕ್ಕಳಿಗೆ ಕನ್ನಡದ ಶಾಲು ಹೊದಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಎಂ., ಡಾ.ಸಂತೋಷ್ ಕುಮಾರ್, ಹಿರಿಯರಾದ ಶ್ರೀನಿವಾಸ ನಾಯಕ್ ಭಾಗವತರ ಬೆಟ್ಟು, ಮಾಜಿ ತಾಪಂ ಸದಸ್ಯೆ ಸುನೀತಾ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಶೇಖರ ಅಜೆಕಾರು, ಅಜೆಕಾರು ಲಯನ್ಸ್ ಕ್ಲಬ್ ಕಾರ್ಯದಶಿರ್ ಥಾಮಸ್ ಲೂಕಸ್ ಮಾತನಾಡಿದರು.
ಬೆಳ್ತಂಗಡಿ ಪೇರಿ ಅಂಗನವಾಡಿ ಹೊಸಂಗಡಿಯ ಶಿಕ್ಷಕಿ ಸುಕನ್ಯಾ ರಾವ್ ಅವರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಶಿಕ್ಷಕಿ ಶಕುಂತಳಾ ಮತ್ತು ಸಹಾಯಕಿ ಥೆರಸಾ ತಾವ್ರೊ ಅತಿಥಿಗಳನ್ನು ಗೌರವಿಸಿದರು. ಬಾಲಕಲಾವಿದೆ ಆರಾಧನಾ ಭಟ್ ನಿಡ್ಡೋಡಿ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯಶ್ರೀ ವಂದಿಸಿದರು. ಬಳಿಕ ವಿವಿಧ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಿದವು.