ಮಾಣಿ: ಕಾರು - ದ್ವಿಚಕ್ರ ವಾಹನ ಢಿಕ್ಕಿ ಹಿನ್ನೆಲೆ; ಇತ್ತಂಡಗಳ ನಡುವೆ ಮಾರಾಮಾರಿ
ಬಂಟ್ವಾಳ, ಮೇ 13: ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಹಿನ್ನೆಲೆಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಇದೀಗ ನಡೆದಿದೆ.
ಘಟನೆಯಿಂದ ಓರ್ವನಿಗೆ ಗಾಯವಾಗಿದ್ದು, ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾದ ಕಾರನ್ನು ಉದ್ರಿಕ್ತರ ತಂಡ ಹಾನಿಗೊಳಿಸಿದೆ ಎಂದು ತಿಳಿದುಬಂದಿದೆ.
ಫರಂಗಿಪೇಟೆ ಮೂಲದ ಆಕ್ಟೀವ್ ಹಾಗೂ ಇನ್ನೂ ಕೆಲವು ದ್ವಿಚಕ್ರ ವಾಹನಗಳು ಪೆರ್ನೆ ಕಡೆಯಿಂದ ಫರಂಗಿಪೇಟೆ ಕಡೆಗೆ ತೆರಳುತ್ತಿದ್ದ ವೇಳೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಬಾರ್ ಮುಂಭಾಗ ಸ್ವಿಪ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಇದೇ ವಿಚಾರದಲ್ಲಿ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ದ್ವಿಚಕ್ರದಲ್ಲಿದ್ದ ಉದ್ರಿಕ್ತರ ತಂಡ ಕಾರನ್ನು ಪುಡಿಗಟ್ಟಿದ್ದಾರೆನ್ನಲಾಗಿದೆ.
ಬಳಿಕ ಇತ್ತಂಡದ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷಿದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡ ವ್ಯಕ್ತಿಯೊಬ್ಬರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಇತ್ತಂಡದವರು ಒಂದೇ ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.