ವಿಜಯಾ ಬ್ಯಾಂಕ್ ನಿವೃತ್ತ ನೌಕರರ ಪ್ರಥಮ ವಲಯ ಸಮ್ಮೇಳನ
ಉಡುಪಿ, ಮೇ 20: ವಿಜಯ ಬ್ಯಾಂಕ್ ನಿವೃತ್ತ ನೌಕರರ ಉಡುಪಿ ವಲಯದ ಪ್ರಥಮ ಸಮ್ಮೇಳನ ನಗರದ ಹೊಟೇಲ್ ಕಿದಿಯೂರು ಸಭಾಂಗಣ ದಲ್ಲಿ ಶನಿವಾರ ನಡೆಯಿತು.
ಅಖಿಲ ಭಾರತ ನಿವೃತ್ತ ಬ್ಯಾಂಕ್ ನೌಕರರ ಉಪಪ್ರಧಾನ ಕಾರ್ಯದಶಿ ಹಾಗೂ ವಿಜಯಾ ಬ್ಯಾಂಕ್ ನಿವೃತ್ತ ಬ್ಯಾಂಕ್ ನೌಕರರ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವನಾಥ ನಾಯ್ಕಾ ಅವರು ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ನಿವೃತ್ತ ಬ್ಯಾಂಕ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಮುಖ್ಯವಾಗಿ ಕಾಲಕಾಲಕ್ಕೆ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿಯ ಹೆಚ್ಚಳ, ಆರೋಗ್ಯ ವಿಮೆಯ ಬಗ್ಗೆ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಸ್ತಾಪಿಸಿ, ಈ ಬಗ್ಗೆ ಸಂಘ ನಡೆಸಿದ ಹೋರಾಟದ ಕುರಿತು ವಿವರಿಸಿದರು. ಕೇಂದ್ರ ಸರಕಾರ ಹಾಗೂ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಈ ಬಗ್ಗೆ ಸಕಾರಾತ್ಮವಾಗಿ ಸ್ಪಂಧಿಸುವಂತೆ ಅವರು ಮನವಿ ಮಾಡಿದರು.
ವಿಜಯಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಚೇರ್ಮೆನ್ ಎ.ಬಿ.ಶೆಟ್ಟಿ ಸಂಘಟನೆ ನಡೆದು ಬಂದ ದಾರಿ ಹಾಗೂ ಅದರ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ಸಂಘದ ಅಧ್ಯಕ್ಷ ಸುಧಾಕರ ಹೆಗ್ಡೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪಿ.ರಾಘವೇಂದ್ರ ರಾವ್, ಕಾಯದರ್ಶಿ ಯು.ಶಿವರಾಯ ಉಪಸ್ಥಿತರಿದ್ದರು. ಅನಿಲ್ಕುಮಾರ್ ಶೆಟ್ಟಿ ಸ್ವಾಗತಿಸಿದರೆ, ಸಿ.ಸುಧಾಕರ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮುಂದಿನ ಸಾಲಿಗೆ ಉಡುಪಿ ವಲಯ ವಿಜಯಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಚೇರ್ಮೇನ್ ಆಗಿ ಬಿ.ಎಚ್.ಗಿರಿಧರ ಶೆಟ್ಟಿ, ಅಧ್ಯಕ್ಷರಾಗಿ ಅನಿಲ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಯಾಗಿ ಪಾಂಡುರಂಗ ಕರ್ಕೇರ, ಕೋಶಾಧಿಕಾರಿ ಯಾಗಿ ಸುಧಾರಾಮ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.