ಪ್ರಾದೇಶಿಕ ಆಯುಕ್ತರನ್ನು ಭೇಟಿ ಮಾಡಿದ ಎಐಟಿಯುಸಿ ನಿಯೋಗ
ಭವಿಷ್ಯನಿಧಿ ಇಲಾಖೆಯಿಂದ ಕಾರ್ಮಿಕರಿಗೆ ಅನ್ಯಾಯ
ಮಂಗಳೂರು, ಮೇ 22: ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಭವಿಷ್ಯ ನಿಧಿ ಸಂಸ್ಥೆಯು ಕೇಂದ್ರ ಸರಕಾರದ ಡಿಜಿಟಲೀಕರಣ ಯೋಜನೆ ಯನ್ನು ಜಾರಿಗೊಳಿಸುವ ತರಾತುರಿಯಲ್ಲಿ ಇಪಿಎಫ್ ಡಾಟ ಹಾಗೂ ಆಧಾರ್ ದಾಖಲೆಗಳು ಹೊಂದಾಣಿಕೆಯಾಗಬೇಕು ಎಂಬ ನಿಯಮಗಳನ್ನು ಕಡ್ಡಾಯಗೊಳಿಸಿದ ಕಾರನ ಬೀಡಿ ಕಾರ್ಮಿಕರು ಭವಿಷ್ಯ ನಿಧಿ ಹಾಗೂ ಪಿಂಚಣಿಗೆ ಅರ್ಜಿ ಸಲ್ಲಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತೆ ಎಐಟಿಯುಸಿ ನಿಯೋಗ ಬುಧವಾರ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿತು.
ಬಹುತೇಕ ಬೀಡಿ ಕಾರ್ಮಿಕರು ಅನಕ್ಷರಸ್ಥರಾಗಿದ್ದು, ಅವರು ಬೀಡಿ ಕೆಲಸಕ್ಕೆ ಸೇರುವ ಸಂದರ್ಭ ಕಂಪೆನಿಗೆ ನೀಡಿದ ಪ್ರಾಯವು ಅಂದಾಜಿಗೆ ದಾಖಲಾಗಿತ್ತು. ಈ ದಾಖಲೆಗಳು ಮತ್ತು ಆಧಾರ್ ಕಾರ್ಡ್ ಹೊಂದಾಣಿಕೆಯಾಗದ ಕಾರಣ ಕಾರ್ಮಿಕರು ತನ್ನ ಅಗತ್ಯಕ್ಕೆ ಭವಿಷ್ಯನಿಧಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೈಬರ್ ಕೇಂದ್ರ ಹಾಗೂ ಭವಿಷ್ಯ ನಿಧಿ ಕಚೇರಿಗೆ ದಿನನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಆದಾಯದಲ್ಲಿ ಜೀವನ ನಡೆಸುವ ಬೀಡಿ ಕಾರ್ಮಿಕರು ಈ ಅವ್ಯವಸ್ಥೆಯಿಂದಾಗಿ ರೋಸಿ ಹೋಗಿದ್ದಾರೆ. ಜನನ ದಾಖಲೆಗಳ ಯಥಾ ಪ್ರತಿಯೊಂದಿಗೆ ಜಾಯಿಂಟ್ ಡಿಕ್ಲರೇಶನ್ ಕೊಟ್ಟು ಸರಿಪಡಿಸಲು ಅವಕಾಶವಿದ್ದರೂ ಕೂಡಾ ಇದು ಸಾಕಾಗುವುದಿಲ್ಲ. ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಆಧಾರ್, ಪಾನ್ಕಾರ್ಡ್, ಪಾಸ್ಪೋರ್ಟ್ ಇತ್ಯಾದಿ ಜನನದ ಮೂಲ ದಾಖಲೆಗಳನ್ನೇ ನೀಡಬೇಕು ಎಂದು ಕಡ್ಡಾಯಗೊಳಿಸಿರುವುದನ್ನು ಕೈ ಬಿಡುವಂತೆ ನಿಯೋಗ ಒತ್ತಾಯಿಸಿತು.
ಒಂದು ವರ್ಷಕ್ಕಿಂತ ಅಧಿಕ ವ್ಯತ್ಯಾಸವಿರುವ ಕಾರ್ಮಿಕರ ಆಧಾರ್ ಕಾರ್ಡನ್ನು ಸರಿಪಡಿಸಲು ಆಧಾರ್ ಕೇಂದ್ರದಲ್ಲಿ ತಿದ್ದುಪಡಿ ಮಾಡಿದರೂ ಸೈಬರ್ ಕೇಂದ್ರದಲ್ಲಿ ಆಧಾರ್ ಪ್ರತಿ ತೆಗೆಯಲು ಹೋದಾಗ ತಿದ್ದುಪಡಿ ತಿರಸ್ಕೃತಗೊಂಡಿದೆ ಎಂಬ ಮಾಹಿತಿ ಬರುತ್ತಿದೆ. ಕಾರ್ಮಿಕರು ಆಧಾರ್ಗಾಗಿ ಅಲೆದು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕೂಡಾ ಚರ್ಚಿಸಿ ಅಂತಹ ಅನಿವಾರ್ಯ ತುರ್ತು ಸಂದರ್ಭ ಆಫ್ಲೈನಲ್ಲಿ ಪಿಎಫ್ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಯಿತು.
ಭವಿಷ್ಯನಿಧಿ ಸಂಬಂಧಿಸಿದ ಕಾರ್ಮಿಕರ ಅಹವಾಲುಗಳನ್ನು ಆಲಿಸಲು ಪ್ರತೀ ತಿಂಗಳ 10ರಂದು ಭವಿಷ್ಯ ನಿಧಿ ಅದಾಲತ್ ನಡೆಸಲಾಗುತ್ತಿತ್ತು. ಇತ್ತೀಚೆಗೆ ಇದನ್ನು ರದ್ದುಪಡಿಸಲಾಗಿದ್ದು, ಇಲಾಖೆಯು ಪುನಃ ಇದನ್ನು ಪುನರಾರಂಭಿಸುವಂತೆ ನಿಯೋಗ ಒತ್ತಾಯಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಭವಿಷ್ಯ ನಿಧಿ ಆಯುಕ್ತರು ಬೀಡಿ ಕಾರ್ಮಿಕರು ಜನನ ದಿನಾಂಕಕ್ಕೆ ಸಂಬಂಧಿಸಿದಂತೆ ಯಾವುದೇ ಮೂಲ ದಾಖಲೆಗಳನ್ನು ನೀಡುವ ಆವಶ್ಯಕತೆ ಇಲ್ಲವೆಂದೂ ಯಥಾಪ್ರತಿ ದಾಖಲೆಗಳನ್ನು ನೀಡಿ ಆವಶ್ಯಕತೆ ಬಿದ್ದಾಗ ತಾವೇ ಮೂಲ ದಾಖಲೆಗಳನ್ನು ಪರಿಶೀಲಿಸಲು ಸಭೆ ಕರೆಯುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ವಿ. ಭಟ್ ಉಡುಪಿ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾವ್, ಎಐಟಿಯುಸಿ ರಾಜ್ಯ ಮುಖಂಡ ವಿ. ಕುಕ್ಯಾನ್, ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನ್ ನ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್, ಸಹ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ್, ಎಂ. ಕರುಣಾಕರ್ ಉಪಸ್ಥಿತರಿದ್ದರು.
ಜೂ.4: ಭವಿಷ್ಯ ನಿಧಿ ಚಲೋ ಭವಿಷ್ಯ ನಿಧಿ ಆಯುಕ್ತರು ನೀಡಿದ ಭರವಸೆಗಳು ಈಡೇರದೆ ಸಮಸ್ಯೆ ಯಥಾ ಸ್ಥಿತಿ ಮುಂದುವರಿದರೆ ಜೂ.4ರಂದು ಜಿಲ್ಲೆಯ ಎಲ್ಲಾ ಬೀಡಿ ಕಾರ್ಮಿಕರನ್ನು ಸೇರಿಸಿ ಭವಿಷ್ಯ ನಿಧಿ ಕಚೇರಿ ಚಲೋ ನಡೆಸಿ ಬೇಡಿಕೆ ಈಡೇರಿಸಲು ಒತ್ತಾಯಿಸಲಾಗುವುದು ಎಂದು ಎಸ್ಕೆ ಬೀಡಿ ವರ್ಕರ್ಸ್ ಫೆಡರೇಶನ್ನ ಕಾರ್ಯದರ್ಶಿ ವಿ.ಎಸ್. ಬೇರಿಂಜ ತಿಳಿಸಿದ್ದಾರೆ.