ಬಿಜೆಪಿ ಗೆಲುವು : ಮೂಡುಬಿದಿರೆಯಲ್ಲಿ ಸಂಭ್ರಮಾಚರಣೆ
ಮೂಡುಬಿದಿರೆ: ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನ ಪಡೆದ ಬಿಜೆಪಿ ಪಕ್ಷ ಹಾಗೂ ದ.ಕ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಸತತ ಮೂರನೇ ಬಾರಿ ಜಯಗಳಿಸಿದ ಹಿನ್ನೆಲೆಯಲ್ಲಿ ಗುರುವಾರ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಪಕ್ಷದ ಮುಖಂಡರು ವಿಜಯೋತ್ಸವ ಆಚರಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತ ವಿಶ್ವ ಗುರು ಆಗುವಲ್ಲಿ ದೇಶದ ಜನರು ನರೇಂದ್ರ ಮೋದಿ ಜೊತೆ ಸಾಗಿದ್ದಾರೆ. ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಹಿಂದೆ ನಾವು ಮನೆ ಮನೆಗೆ ಮುಟ್ಟಿಸಬೇಕಾಗಿತ್ತು. ಆದರೆ ಇಂದು ಚಿತ್ರಣ ಬದಲಾಗಿದೆ ಮನೆ ಮನೆಗಳು ಬಿಜೆಪಿ ಪಕ್ಷದ ಜೊತೆ ಸಾಗುತ್ತಿದೆ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ 40 ಸಾವಿರ ಮತಗಳವರೆಗೆ ಲೀಡ್ ನೀಡುತ್ತೇವೆ ಎಂದು ನಾವು ಮಾತುಕೊಟ್ಟಿದ್ದೇವೆ. 37,225 ಮತಗಳ ಲೀಡ್ ನೀಡುವ ಮೂಲಕ ನಮ್ಮ ಮಾತನ್ನು ಉಳಿಸಿದ್ದೇವೆ. ಈ ಬಾರಿ ಮೂಡುಬಿದಿರೆ ಪುರಸಭೆ ಚುನಾವಣೆಯಲ್ಲೂ ಬಿಜೆಪಿ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ. ಮೂಲಭೂತ ಸೌಕರ್ಯ, ಅಭಿವೃದ್ಧಿಗಾಗಿ ಜನರು ಬಿಜೆಪಿಗೆ ಮತ ನೀಡುತ್ತಾರೆ ಎಂದು ಹೇಳಿದರು.
ಬಿಜೆಪಿ ಪಕ್ಷದ ಮುಖಂಡರಾದ ಮೇಘನಾಥ್ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ಅಜಯ್ ರೈ, ಹರೀಶ್ ಎಂ.ಕೆ, ಶಶಿಧರ್ ಅಂಚನ್ , ಹನೀಫ್ ಅಲಂಗಾರ್, ಪ್ರದೀಪ್ ರೈ, ಗಿರೀಶ್ ಕೋಟೆಬಾಗಿಲು, ಕರುಣಾಕರ ಶೆಟ್ಟಿ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.