ಹೆಜಮಾಡಿ: ವಿದ್ಯಾರ್ಥಿಗಳಿಗೆ ಸೀಡ್ಬಾಲ್ ತಯಾರಿ ಪ್ರಾತ್ಯಕ್ಷಿಕೆ
ಮಣಿಪಾಲ ಜು 10: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೋ ಪೌಂಡೇಷನ್ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಹೆಜಮಾಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಗಳಿಗಾಗಿ ಶನಿವಾರ ಸೀಡ್ಬಾಲ್ (ಬೀಜದ ಉಂಡೆ) ತಯಾರಿಕೆಗೆ ಪ್ರಾತ್ಯಕ್ಷಿಕೆ ಯನ್ನು ಏರ್ಪಡಿಸಲಾಗಿತ್ತು.
ಸೀಡ್ಬಾಲ್ ತಯಾರಿಸಲು ಅವಶ್ಯವಿರುವ ಸೋಸಿದ ಮಣ್ಣು, ಸಗಣಿ ಮತ್ತು ಗೋಮೂತ್ರದ ಪ್ರಮಾಣ ಮತ್ತು ಅವುಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸಿ, 6ರಿಂದ 8 ಮಕ್ಕಳ ಗುಂಪುಗಳನ್ನು ಮಾಡಿ, ರಾಂಪಲ, ಹುಣಸೆಬೀಜ ಗಳನ್ನು ಉಪಯೋಗಿಸಿ ಪ್ರತ್ಯಕ್ಷವಾಗಿ ಪ್ರತಿ ವಿದ್ಯಾರ್ಥಿಗಳಿಂದ ಸೀಡ್ಬಾಲ್ ಗಳನ್ನು ತಯಾರಿಸಲಾಯಿತು.
ಭಾರತೀಯ ವಿಕಾಸ ಟ್ರಸ್ಟಿನ ಹಿರಿಯ ಸಲಹೆಗಾರ ಎಚ್.ಅನಂತ ಪ್ರಭು ಅವರು ಹಸಿರು ಪರಿಸರದ ಅವಶ್ಯಕತೆಯನ್ನು ವಿವರಿಸಿ, ವನಮಹೋತ್ಸವದ ಜೊತೆಗೆ ಕಾಡು ಉಳಿಸಲು, ಬೀಜದ ಉಂಡೆಗಳನ್ನು ತಯಾರಿಸಿ ಬೇರೆ ಬೇರೆ ಸ್ಥಳಗಳಲ್ಲಿ ಹಾಕುವುದರಿಂದ ಗಿಡಗಳನ್ನು ಬೆಳೆಸಬಹುದು ಎಂದು ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಸವಿತಾ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿವಾಗಿ ಮಾತನಾಡಿದರು. ಕೃಷಿ ಸಂಘದ ಉಸ್ತುವಾರಿ ಶಿಕ್ಷಕಿ ದೀಪಾ ಉಡುಪ, ಕೃಷಿ ಹಾಗೂ ಹಸಿರು ಪರಿಸರ ಕಾಪಾಡಲು ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸಿದರು. ಶಾಲೆ ಹಳೆ ವಿದ್ಯಾರ್ಥಿ ಶೇಖರ ಹೆಜಮಾಡಿ ಉಪಸ್ಥಿತರಿದ್ದರು. ಶಾಲೆಯ ದೈಹಿಕ ಶಿಕ್ಷಕ ಆಲ್ವಿನ್ ಅಂದ್ರಾದೆ ವಂದಿಸಿದರು.