ರಾಜ್ಯಮಟ್ಟದ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ
ಮೂಡುಬಿದಿರೆ : ಮಹಾನಗರಗಳಲ್ಲಿ ಸ್ಮಾರ್ಟ್ ಅಪ್ ಕಂಪನಿಗಳು ಉದ್ಯೋಗದ ಆಮೀಷ ನೀಡಿ ವಂಚಿಸುತ್ತಿವೆ. ತಾಂತ್ರಿಕ ಶಿಕ್ಷಣ ಪಡೆದವರು ವೃತ್ತಿಪರರಾಗದಿರುವುದು ಮತ್ತು ಕಲಿಕೆಯೊಂದಿಗೆ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳದಿರುವುದರಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಪದವಿಯೊಂದಿಗೆ ವಿಶೇಷ ಕೌಶಲ್ಯವಿದ್ದಾಗ ಮಾತ್ರ ಬೇಡಿಕೆ ಬರುತ್ತದೆ ಎಂದು ರುಡ್ಸೆಟ್ ಆರ್ಸಿಟಿಯ ನಿರ್ದೇಶಕ ರಾಮಕೃಷ್ಣ ಮಾನೆ ಹೇಳಿದರು.
ಅವರು ತನ್ಮಯಿ ಟೆಕ್ನಾಲಜಿ ಸಂಯೋಜನೆಯಲ್ಲಿ ತ್ರಿಭುವನ್ ಜೇಸಿಸ್, ರೋಟರಿ ಕ್ಲಬ್ ಟೆಂಪಲ್ಟೌನ್ ಸಹಯೋಗದೊಂದಿಗೆ ಸಮಾಜಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯುವ ವೃತ್ತಿನಿರತ ಟಿವಿ ಮೆಕ್ಯಾನಿಕ್ಗಳಿಗೆ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಎಸ್ಎನ್ಎಂ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಜೆ.ಜೆ ಪಿಂಟೋ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವೃತ್ತಿನಿರತರು ತಮ್ಮಲ್ಲಿರುವ ಕೌಶಲ್ಯಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಎಲೆಕ್ಟ್ರಾನಿಕ್ ಮಾಧ್ಯಮದ ತಾಂತ್ರಿಕತೆಯು ಬೇಗ ಬದಲಾಗುತ್ತಿರುವುದರಿಂದ ಹೊಸ ಬದಲಾವಣೆಗೆ ನಾವು ಹೊಂದಿಕೊಳ್ಳಬೇಕು ಎಂದರು. ರೋಟರಿ ಕ್ಲಬ್ ಟೆಂಪಲ್ಟೌನ್ ಅಧ್ಯಕ್ಷ ವಿನ್ಸೆಂಟ್ ಡಿಕೋಸ್ತ ಮಾತನಾಡಿ ಶಿಬಿರಕ್ಕೆ ಸಹಕಾರ ನೀಡುವುದಾಗಿ ಹೇಳಿದರು. ತರಬೇತುದಾರ ಎಂ.ಎಸ್ ನಾಯಕ್, ಉದ್ಯಮಿ ಲ್ಯಾನ್ಸಿ ಎಡ್ವರ್ಡ್ ಸೆರಾವೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತ್ರಿಭುವನ್ ಜೇಸಿಸ್ ಅಧ್ಯಕ್ಷ ಸುದೀಪ್ ಬುನ್ನನ್ ಅಧ್ಯಕ್ಷತೆ ವಹಿಸಿದ್ದರು. ಶಾಂತಲಾ ಎಸ್ ಆಚಾರ್ಯ ಜೇಸಿ ಕ್ರೀಡ್ ವಾಚಿಸಿದರು. ವಿನಯ್ಚಂದ್ರ ಅತಿಥಿಗಳನ್ನು ಗೌರವಿಸಿದರು.