ಉಳ್ಳಾಲ: ರಕ್ಷಕ-ಶಿಕ್ಷಕ-ವಿದ್ಯಾರ್ಥಿ ಸಮಾವೇಶ
ಮಂಗಳೂರು, ಜೂ.20: ಉಳ್ಳಾಲ ಅಳೇಕಲದ ಮದನಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ-ವಿದ್ಯಾರ್ಥಿ ಸಮಾವೇಶ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಪ್ರಾಂಶುಪಾಲ ಇಸ್ಮಾಯಿಲ್ ಟಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ರಕ್ಷಕ-ಶಿಕ್ಷಕರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿ ಪ್ರತಿಯೋರ್ವ ವಿದ್ಯಾರ್ಥಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣ ಕಾರ್ಯದಲ್ಲಿ ರಕ್ಷಕರ ಹಾಗೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇದರ ಪೂರ್ಣ ಪ್ರಮಾಣದ ಯಶಸ್ಸಿಗೆ ಶಾಲಾ ಪರಿಸರ ಹಾಗೂ ಮನೆಯ ವಾತಾವರಣ ಪೂರಕ ವೇದಿಕೆಯಾಗಬೇಕು ಎಂದರು.
ವಿದ್ಯಾರ್ಥಿ ಸಂಘ, ಎನ್ಎಸ್ಎಸ್, ಕ್ರೀಡಾ ಸಂಘ ಹಾಗೂ ಸಾಹಿತ್ಯ ಸಂಘಗಳನ್ನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಉಪನಿರ್ದೇಶಕ ರಾಜೇಶ್ ಉದ್ಘಾಟಿಸಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ಪಂಡಿತ್ ಮುಹಮ್ಮದ್ ಮಾತನಾಡಿದರು. ವಿವಿಧ ಸಂಘಗಳ ಚುನಾಯಿತ ಪ್ರತಿನಿಧಿಗಳ ಪ್ರತಿಜ್ಞಾ ಕಾರ್ಯವನ್ನು ಶಾರೀರಿಕ ಶಿಕ್ಷಣ ಶಿಕ್ಷಕ ಅಶ್ರಫ್ ನೆರವೇರಿಸಿದರು.ವೇದಿಕೆಯಲ್ಲಿ ಕಾಲೇಜು ವಿಭಾಗದ ಸಂಚಾಲಕ ಯು.ಎನ್ ಇಬ್ರಾಹಿಂ, ಇತಿಹಾಸ ವಿಭಾಗದ ಮೆಟಿಲ್ಡಾ ಕ್ರಾಸ್ತ, ಆಂಗ್ಲ ಭಾಷಾ ವಿಭಾಗದ ನಸೀರಾ, ಉಪನ್ಯಾಸಕ ಅಬ್ದುಲ್ ಅಝೀಝ್, ಉಪನ್ಯಾಸಕಿ ಸುರೇಖ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಹಬೀಬ್ ರಹಿಮಾನ್ ಸ್ವಾಗತಿಸಿ, ಮುಹಮ್ಮದ್ ಫಾಝಿಲ್ ವಂದಿಸಿದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಶಮೀರ್ ಕಾರ್ಯಕ್ರಮ ನಿರೂಪಿಸಿದರು.