ಕಿಸಾನ್ ಸಮ್ಮಾನ್ ನಿಧಿ: ಜೂ.25ರೊಳಗೆ ನೋಂದಾಯಿಸಿ
ಮಂಗಳೂರು, ಜೂ.24: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲ ರೈತ ಕುಟುಂಬಗಳಿಗೆ ಪ್ರತೀವರ್ಷ 6,000 ರೂ.ಗಳನ್ನು ಪ್ರತೀ ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ಮೂರು ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
ರೈತರು ತಮ್ಮ ಆಧಾರ್ ಸಂಖ್ಯೆ, ಪಹಣಿ ವಿವರ ಹಾಗೂ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಹತ್ತಿರದ ಗ್ರಾಮಕರಣಿಕರ ಕಚೇರಿ, ನಾಡಕಚೇರಿ, ತಾಲೂಕು ಕಚೇರಿ, ಗ್ರಾಪಂ ಕಚೇರಿಯ ಬಾಪೂಜಿ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರ ಅಥವಾ ಅಟಲ್ಜೀ ಜನಸ್ನೇಹಿ ಕೇಂದ್ರ ಹಾಗೂ ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸ್ವಯಂ ಘೋಷಣಾ ಪತ್ರದೊಂದಿಗೆ ಜೂ.25ರೊಳಗೆ ನೋಂದಾಯಿಸಿಕೊಳ್ಳಲು ತಿಳಿಸಿದೆ.
ಆದರೆನಿವೃತ್ತ/ಹಾಲಿ ಸೇವೆಯಲ್ಲಿರುವ ಸರಕಾರಿ ಅಧಿಕಾರಿ ನೌಕರರು (ಗ್ರೂಪ್ ಡಿ. ಹೊರತುಪಡಿಸಿ), 10,000 ರೂ.ಗಿಂತ ಹೆಚ್ಚಿನ ಮೊತ್ತ ಪಡೆಯುತ್ತಿರುವ ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರು, ವೃತ್ತಿಪರರು (ವೈದ್ಯರು, ಅಭಿಯಂತರರು, ವಕೀಲರು ಮತ್ತು ಇತರ), ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದವರು, ನಿವೇಶನ, 94ಸಿ, ಮತ್ತು ಭೂ ಪರಿವರ್ತಿತ ಜಮೀನುಗಳನ್ನು ಹೊಂದಿದವರಿಗೆ ಇದು ಅನ್ವಯಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.