ಮಂಗಳೂರು: ಶಾಹೀನ್ಸ್ ಫಾಲ್ಕನ್ ಪಿಯು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ
ಮಂಗಳೂರು, ಜೂ.25: ಓರ್ವ ವ್ಯಕ್ತಿ ಜೀವನದಲ್ಲಿ ಒಳ್ಳಯ ಮಗು, ಉತ್ತಮ ವಿದ್ಯಾರ್ಥಿ ಹಾಗೂ ಅತ್ಯುತ್ತಮ ಮನುಷ್ಯನಾಗಿ ರೂಪುಗೊಂಡಾಗ ಜೀವನ ಪರಿಪೂರ್ಣವಾಗುತ್ತದೆ. ಅಂತಹ ಪರಿಪೂರ್ಣತೆ ಸಾಧಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವವಾದುದ್ದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಿಸಿದ್ದಾರೆ.
ಹಂಪನಕಟ್ಟೆಯಲ್ಲಿರು ಶಾಹೀನ್ಸ್ ಫಾಲ್ಕನ್ ಪಿಯು ಕಾಲೇಜಿನ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯಸ್ಥ ಅಬ್ದುಲ್ ಸುಭ್ ಹಾನ್ ಮಾತನಾಡಿ, ನಮಗೆ ಇನ್ನೊಬ್ಬರು ಆದರ್ಶವಾಗಿರುವುದು ಸಾಮಾನ್ಯ. ಆದರೆ ನಾವೇ ಹಲವರ ಕನಸಾಗಿ ರೂಪುಗೊಳ್ಳಬೇಕು ಎಂದರು.
ವಿಶ್ವಾಸ್ ಬಾವಾ ಬಿಲ್ಡರ್ನ ಮಾಲಕ ಅಬ್ದುರ್ರವೂಫ್ ಪುತ್ತಿಗೆ ಮಾತನಾಡಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲೆ ತಾರಕೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೀಟ್ ಪರೀಕ್ಷೆಯಲ್ಲಿ 90 ರ್ಯಾಂಕ್ ಗಳಿಸಿದ ಮುಹಮ್ಮದ್ ಮುದಸ್ಸಿರ್ ಅಹ್ಮದ್, 582 ರ್ಯಾಂಕ್ ಗಳಿಸಿರುವ ಮುಹಮ್ಮದ್ ಅಮಾನ್ ರಿಝ್ವಿ ಹಾಗೂ ಉನ್ನತ ಅಂಕಗಳನ್ನು ಗಳಿಸಿರುವ ಝುವೇರಿಯಾ ಖಾನ್, ಅಫ್ರೋಸಾ ಬಶೀರ್ ಕೆ.ಪಿ., ಉಮ್ಮೆ ಹಾನಿ, ಅಬ್ದುಲ್ ಅಝೀಝ್ರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಈ ಸಂದರ್ಭ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.