ಅಕ್ರಮ ಗಾಂಜಾ ಮಾರಾಟ: ಪಶ್ಚಿಮ ಬಂಗಾಳ ಮೂಲದ ಆರೋಪಿ ಸೆರೆ, 5ಕೆ.ಜಿ. ಗಾಂಜಾ ವಶ
ಉಡುಪಿ, ಜೂ.25: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಜೂ.25ರಂದು ಮಧ್ಯಾಹ್ನ 12.15ರ ಸುಮಾರಿಗೆ ಮಣಿಪಾಲ ವಿದ್ಯಾರತ್ನ ನಗರ ಎಂಬಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಪಶ್ಚಿಮ ಬಂಗಾಳ ಮೂಲದ ಮಣಿಪಾಲ ಈಶ್ವರನಗರದ ಆತ್ಮಿ ರೆಸಿಡೆನ್ಸಿ ನಿವಾಸಿ ಪ್ರಖರ್ ಶ್ರೀವಾಸ್ತವ(24) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 1,30,000ರೂ. ಮೌಲ್ಯದ 5.280ಕಿ.ಲೋ. ಗಾಂಜಾ ಮತ್ತು 5,000ರೂ. ಮೌಲ್ಯದ ಮೊಬೈಲ್, 250ರೂ. ಮೌಲ್ಯದ ತೂಕಸಾಧನ ಮತ್ತು 1,000ರೂ. ಮೌಲ್ಯದ ಟ್ರಾಲ್ ಬ್ಯಾಗ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ ಪಿ. ನೇತೃತ್ವದ ತಂಡ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಸೆನ್ ಎಎಸ್ಸೈ ಕೇಶವ ಗೌಡ ಸಿಬ್ಬಂದಿಗಳಾದ ಸತೀಶ್ ಬೆಳ್ಳೆ, ರಾಘವೇಂದ್ರ ಉಪ್ಪೂರು, ಕೃಷ್ಣ ಪ್ರಸಾದ್, ಸಂಜಯ್, ನಾಗೇಶ್, ಶ್ರೀಧರ್, ರಾಘವೇಂದ್ರ ಬ್ರಹ್ಮಾವರ, ಪ್ರಸನ್ನ ಸಾಲಿಯಾನ್, ಸಂತೋಷ ಖಾರ್ವಿ, ಪ್ರವೀಣ್ ಮತ್ತು ಜೀವನ್ ಪಾಲ್ಗೊಂಡಿದ್ದಾರೆ.