ಅಕ್ರಮ ಗೋ ಸಾಗಾಟ ಪ್ರಕರಣ: ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರು ಸೇರಿ 6 ಮಂದಿ ಸೆರೆ
ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ
ಉಪ್ಪಿನಂಗಡಿ: ಅಕ್ರಮ ಗೋ ಸಾಗಾಟಕ್ಕೆ ಸಂಬಂಧಿಸಿ ಇಬ್ಬರನ್ನು ಹಾಗೂ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಗುರುವಾರ ರಾತ್ರಿ ಮೊಗ್ರುವಿನಲ್ಲಿ ನಡೆದಿದೆ.
ಅಕ್ರಮ ಗೋ ಸಾಗಾಟಕ್ಕೆ ಸಂಬಂಧಿಸಿ ವಾಹನ ಚಾಲಕ ಬೆಳಾಲು ನಿವಾಸಿ ಹೊನ್ನಪ್ಪ ಗೌಡ (55), ಮೊಗ್ರು ಗ್ರಾಮದ ಮಾಪಲ ಮನೆಯ ಉಸ್ಮಾನ್ (60) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದು, ಅಕ್ರಮ ಗೋ ಸಾಗಾಟಗಾರರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರೆನ್ನಲಾದ ಬಂದಾರು ಗ್ರಾಮದ ಮೈರೋಲ್ತಡ್ಕ ನಿವಾಸಿ ಸಂತೋಷ್ ಪೂಜಾರಿ (30), ಕಣಿಯೂರು ಗ್ರಾಮದ ಧನರಾಜ್ (21), ಕಣಿಯೂರು ಗ್ರಾಮದ ಪದ್ಮುಂಜ ನಿವಾಸಿ ಲತೀಶ (20) ಹಾಗೂ ಕಣಿಯೂರು ಗ್ರಾಮದ ಮೋರ್ಜಾಲು ನಿವಾಸಿ ಶರತ್ (19) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಗುರುವಾರ ರಾತ್ರಿ ಮೊಗ್ರು ಜಂಕ್ಷನ್ನಲ್ಲಿ ವಾಹನವೊಂದನ್ನು ತಡೆದು ನಿಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದು ತಕ್ಷಣವೇ ಉಪ್ಪಿನಂಗಡಿ ಪೊಲೀಸರು ಅಲ್ಲಿಗೆ ಧಾವಿಸಿದ್ದು, ಅಕ್ರಮ ಗೋ ಸಾಗಾಟಗಾರರನ್ನು ವಶಕ್ಕೆ ತೆಗೆದುಕೊಂಡರು. ಅಲ್ಲದೆ, ಗೋ ಸಾಗಾಟಗಾರರಿಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ನಾಲ್ವರನ್ನೂ ವಶಕ್ಕೆ ಪಡೆದರಲ್ಲದೆ, ಘಟನಾ ಸ್ಥಳದಲ್ಲಿದ್ದ ಬೈಕ್ಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದರು.
ಅಕ್ರಮ ಗೋ ಸಾಗಾಟಗಾರರನ್ನು ತಡೆದ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಸುಮಾರು 200ರಷ್ಟು ಮಂದಿ ತಡರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ಬಳಿಕ ಸ್ಥಳಕ್ಕೆ ಶಾಸಕ ಹರೀಶ್ ಪೂಂಜಾ, ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ ಸೇರಿದಂತೆ ಹಲವರು ಠಾಣೆಗೆ ಆಗಮಿಸಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸದೆ ಬಿಡುವಂತೆ ಪಟ್ಟು ಹಿಡಿದರು. ಆದರೆ ಒತ್ತಡಕ್ಕೆ ಮಣಿಯದ ಪೊಲೀಸರು ಅಕ್ರಮ ಗೋ ಸಾಗಾಟಗಾರರು ಹಾಗೂ ಹಲ್ಲೆಗೈದವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡರು. ಬಳಿಕ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರನ್ನು ಉಪ್ಪಿನಂಗಡಿ ಪೊಲೀಸರು ಜಾಮೀನಿನ ಮೂಲಕ ಬಿಡುಗಡೆಗೊಳಿಸಿದರು.
ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂಬ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದ್ದು, ಇವರು ಈ ಜಾನುವಾರುಗಳು ಅಕ್ರಮವಲ್ಲ ಎಂಬ ದಾಖಲೆ ತೋರಿಸಿದ್ದರೆ ಅವರಿಗೂ ಠಾಣೆಯಲ್ಲೇ ಜಾಮೀನು ಮಂಜೂರು ಮಾಡಬಹುದಿತ್ತು. ಆದರೆ ಅವರು ಅದನ್ನು ಇನ್ನೂ ತೋರಿಸಿಲ್ಲ. ಆದ್ದರಿಂದ ಅವರು ನಮ್ಮ ವಶದಲ್ಲಿದ್ದಾರೆ ಎಂದು ಉಪ್ಪಿನಂಗಡಿ ಠಾಣಾಧಿಕಾರಿ ನಂದಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.