ನಾಪತ್ತೆಯಾಗಿದ್ದ ಯುವಕನ ಮೃತದೇಹ ವೆಂಕಟಾಪುರ ನದಿಯಲ್ಲಿ ಪತ್ತೆ
ಭಟ್ಕಳ: ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಕಡವಿನ ಕಟ್ಟೆಯಲ್ಲಿ ಈಜಲು ತೆರಳಿದ್ದ ನಗರದ ಉಮರ್ ಸ್ಟ್ರೀಟ್ 2ನೇ ಕ್ರಾಸ್ ನಿವಾಸಿ ಇಬ್ರಾಹೀಮ್ ಆಬೀದಾ (16) ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು ಆತನ ಮೃತದೇಹ ಶುಕ್ರವಾರ ಮಧ್ಯಾಹ್ನ ಶಿರಾಲಿಯ ವೆಂಕಟಾಪುರ ನದಿಯಲ್ಲಿ ಪತ್ತೆಯಾಗಿದೆ.
ಸುರಿಯತ್ತಿರುವ ಮಳೆಯಲ್ಲಿ ಬುಧವಾರ ಸಂಜೆ ತನ್ನ ಗೆಳೆಯರೊಂದಿಗೆ ಕಡವಿನಕಟ್ಟಾ ಡ್ಯಾಮ್ ಗೆ ಈಜಲು ತೆರಳಿದ್ದ ಇಬ್ರಾಹಿಮ್ ಆಬಿದಾ ಉತ್ತಮ ಈಜುಗಾರನಾಗಿದ್ದರೂ ತುಂಬಿ ಹರಿಯುತ್ತಿದ್ದ ಡ್ಯಾಂ ನ ನೀರಿನ ಸೆಳೆತಕ್ಕೆ ಬಹುದೂರ ಹರಿದು ಹೋಗಿದ್ದು, ಪೊಲೀಸ್ ಇಲಾಖೆ, ಹಾಗೂ ಸ್ಥಳಿಯರು ಯುವಕನ ಪತ್ತೆಗಾಗಿ ಹುಡುಕಾಡಿದ್ದರು ಅಲ್ಲದೆ ಮಂಗಳೂರು ಹಾಗೂ ಮುರುಢೇಶ್ವರದಿಂದ ಮುಳುಗು ತಜ್ಞರೂ ಸತತವಾಗಿ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗದೆ ಶುಕ್ರವಾರ ಮಧ್ಯಾಹ್ನ ಶಿರಾಲಿಯ ವೆಂಕಟಾಪುರ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತದೇಹ ದೊರೆತ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ವೆಂಕಟಾಪುರದ ನದಿ ಬಳಿ ಸೇರಿದ್ದು ನಂತರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಿದ್ದು ಸಂಜೆ 5-30ಕ್ಕೆ ಜಾಮೀಯ ಮಸೀದಿ ವಠಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.