ಮಂಗಳೂರು: ಜೈಲ್ ಸಹಾಯಕನಿಗೆ ವಾರ್ಷಿಕ ವೇತನ ಭಡ್ತಿಗೆ ತಡೆ
ಜಾಮೀನು ಸಿಗದ ಆರೋಪಿಗಳಿಗೆ ಜಾಮೀನು ನೀಡಿದ ಪ್ರಕರಣ
ಮಂಗಳೂರು, ಜು.16: ಜಾಮೀನು ಸಿಗದೆ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಜಿಲ್ಲಾ ಉಪಕಾರಾಗೃಹದ ಜೈಲ್ ಸಹಾಯಕರೊಬ್ಬರ ವಾರ್ಷಿಕ ವೇತನ ಭಡ್ತಿ ತಡೆ ವಿಧಿಸಿ ಕೇಂದ್ರ ಕಾರಾಗೃಹ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ದ.ಕ. ಜಿಲ್ಲಾ ಕಾರಾಗೃಹವು ಶಿವಮೊಗ್ಗ ಕೇಂದ್ರ ಕಾರಾಗೃಹದ ಅಡಿಯಲ್ಲಿ ಬರುತ್ತಿರುವ ಕಾರಣ ಈ ಘಟನೆ ಬಗ್ಗೆ ಶಿವಮೊಗ್ಗ ಜೈಲಿನ ಅಧೀಕ್ಷಕರು ವರದಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಸಹಾಯಕ ಜೈಲರ್ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇದನ್ನು ಆಧರಿಸಿ ಸಹಾಯಕ ಜೈಲರ್ಗೆ ಭಡ್ತಿ ತಡೆ ವಿಧಿಸಿ ಆದೇಶ ಹೊರಡಿಸಲಾಗಿದೆ.
ಜೈಲರ್, ಸೂಪರಿಂಡೆಂಟ್ ಸೇಫ್: ಕೋರ್ಟ್ ನೀಡಿದ ನೋಟಿಸನ್ನು ಪರಿಶೀಲನೆ ನಡೆಸದೆ ಜೈಲರ್ ಹಾಗೂ ಸೂಪರಿಂಡೆಂಟ್ ಜಾಮೀನು ಬಿಡುಗಡೆಗೆ ಸಹಿ ಮಾಡಿದ್ದಾರೆ. ಆದರೆ ಅವರಿಬ್ಬರು ಪ್ರೊಬೆಷನರಿ ಎಂಬ ಕಾರಣಕ್ಕೆ ವಿನಾಯಿತಿ ನೀಡಲಾಗಿದೆ. ಎರಡು ತಿಂಗಳ ಹಿಂದೆ ಚೀಫ್ ವಾರ್ಡರ್ ಆಗಿ ಪದೋನ್ನತಿ ಹೊಂದಿರುವ ಸಹಾಯಕ ಜೈಲರ್ ಭಡ್ತಿ ತಡೆ ಅನುಭವಿಸಬೇಕಾಗಿದೆ.
ವರದಿ ಕೇಳಿದ ಹೈಕೋರ್ಟ್: ಜಾಮೀನು ನೀಡದೆ ಕೊಲೆ ಆರೋಪಿಗಳನ್ನು ಬಿಡುಗಡೆ ಮಾಡಿದ ಪ್ರಕರಣ ಹೈಕೋರ್ಟ್ ಗಮನಕ್ಕೂ ಬಂದಿದ್ದು, ಈ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದೆ ಎಂದು ಜೈಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.