ಜಮೀಯ್ಯತುಲ್ ಫಲಾಹ್ನಿಂದ ಉಚಿತ ವೈದ್ಯಕೀಯ ಶಿಬಿರ
ಮಂಗಳೂರು, ಜು.17: ಜಮೀಯ್ಯತುಲ್ ಫಲಾಹ್ನ ದ.ಕ ಮತ್ತು ಉಡುಪಿ ಜಿಲ್ಲೆ ಗ್ರೀನ್ ವೀವ್ ಶಾಲಾಭಿವೃದ್ಧಿ ಸಮಿತಿ ಹಾಗೂ ದೇರಳಕಟ್ಟೆ ಯೆನಪೊಯ ದಂತ ಮಹಾವಿದ್ಯಾಲಯ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ ಶಿಬಿರವನ್ನು ಗ್ರೀನ್ ವೀವ್ ವಿದ್ಯಾ ಸಂಸ್ಥೆ ಅಡ್ಕರೆಪಡ್ಪುವಿನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ ಫರ್ವೇಝ್ಅಲಿ, ಪ್ರತಿಯೊಬ್ಬರಿಗೂ ದೈಹಿಕ ಕ್ಷಮತೆಯೊಂದಿಗೆ ಬದುಕಬೇಕೆಂಬ ಹಂಬಲವಿರುವುದು ಸಹಜ. ಆ ನಿಟ್ಟಿನಲ್ಲಿ ಆರೋಗ್ಯಕರ ಚಟುವಟಿಕೆಗಳೊಂದಿಗೆ ತೊಡಗಿಸಿಕೊಳ್ಳುವುದು ಬಹಳ ಅಗತ್ಯ ಎಂದು ಹೇಳಿದರು.
ಜಮೀಯ್ಯತುಲ್ ಫಲಾಹ್ ಕೋಶಾಧಿಕಾರಿ ಹಾಜಿ ಇಬ್ರಾಹೀಂ ಕೋಡಿಜಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬೂಬಕರ್, ಉಪಾಧ್ಯಕ್ಷೆ ತಾಹಿರ, ನಿಕಟಪೂರ್ವಧ್ಯಕ್ಷ ಎ.ಬಿ. ಹಸೈನಾರ್, ಯೆನಪೋಯ ಕಾಲೇಜಿನ ವೈದ್ಯರಾದ ಡಾ.ತನ್ಸೀಫ್ ಮತ್ತು ಡಾ. ಜುನೈದ್, ಸಮಾಜ ಕಾರ್ಯವಿಭಾಗದ ಗಾಯತ್ರಿ ಹಾಗೂ ಅಡ್ಕರೆ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಸಿರಾಜ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರಾಂಶುಪಾಲ ಅಬೂಬಕರ್ ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಮುಹಮ್ಮದ್ಅಶ್ರಫ್ ಎಂ.ಕೆ. ಕೃತಜ್ಞತೆ ಸಲ್ಲಿಸಿದರು. ಮುಬೀನಾ ಕಾರ್ಯಕ್ರಮ ನಿರೂಪಿಸಿದರು.