'ಸನ್ಮಾರ್ಗ' ವತಿಯಿಂದ ಕುರ್ ಆನ್ ಕ್ವಿಝ್ ಸ್ಪರ್ಧೆ : ಜು.20ರಂದು ಬಹುಮಾನ ವಿತರಣೆ
ಮಂಗಳೂರು: ಸನ್ಮಾರ್ಗ ಪತ್ರಿಕೆಯ ರಮಝಾನ್ ವಿಶೇಷಾಂಕದಲ್ಲಿ ಏರ್ಪಡಿಸಲಾಗಿದ್ದ ಕುರ್ ಆನ್ ಸ್ಪರ್ಧೆಯ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಜು. 20ರಂದು ಅಪರಾಹ್ನ 3:30ಕ್ಕೆ ಸನ್ಮಾರ್ಗ ಕಚೇರಿಯಿರುವ ಹಿದಾಯತ್ ಸೆಂಟರ್ ನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಒಟ್ಟು 13 ಬಹುಮಾನಗಳುಳ್ಳ ಈ ಸ್ಪರ್ಧೆಯಲ್ಲಿ ಪ್ರಥಮ- 6 ಸಾವಿರ ರೂ., ದ್ವೀತಿಯ- 5 ಸಾವಿರ ರೂ., ತೃತೀಯ- 4 ಸಾವಿರ ರೂ. ಮತ್ತು 10 ಮಂದಿಗೆ ತಲಾ 1 ಸಾವಿರ ರೂ. ನೀಡಲಾಗುವುದು. ಜೊತೆಗೆ ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಸಂಸ್ಥೆಯ ವತಿಯಿಂದ 13 ಸ್ಮರಣಿಕೆ ಗಳನ್ನೂ ನೀಡಲಾಗುವುದು.
ಪವಿತ್ರ ಕುರ್ ಆನಿನ 7 ಮತ್ತು 8 ನೇ ಅಧ್ಯಾಯಗಳಾದ ಅಲ್ ಅಅ್ರಾಫ್ ಹಾಗೂ ಅಲ್ ಅನ್ಫಾಲ್ಗಳನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಶಾಲಾ ಪ್ರಶ್ನೆ ಪತ್ರಿಕೆಯ ಮಾದರಿಯಲ್ಲಿ 75 ಪ್ರಶ್ನೆಗಳನ್ನು ತಯಾರಿಸಿ ಸ್ಪರ್ಧೆಗೆ ಇಡಲಾಗಿತ್ತು. ಇದು ಸನ್ಮಾರ್ಗ ಆಯೋಜಿಸು ತ್ತಿರುವ ನಾಲ್ಕನೇ ವರ್ಷದ ನಾಲ್ಕನೇ ಕುರ್ ಆನ್ ಸ್ಪರ್ಧೆಯಾಗಿದ್ದು, ಆರಂಭದಲ್ಲಿ ಅಲ್ ಬಕರಃ ಅಧ್ಯಾಯವನ್ನು ಸ್ಪರ್ಧೆಗೆ ಪರಿಗಣಿಸಲಾಗಿದ್ದರೆ, ಆ ಬಳಿಕ ಆಲಿ ಇಮ್ರಾನ್ ಮತ್ತು ಅನ್ನಿಸಾ ಅಧ್ಯಾಯಗಳನ್ನು ಜಂಟಿಯಾಗಿ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಕಳೆದ ವರ್ಷ ಅಲ್ ಮಾಯಿದ ಮತ್ತು ಅಲ್ ಆನ್ ಆಮ್ ಅಧ್ಯಾಯಗಳಿಂದ ಪ್ರಶ್ನೆಗಳನ್ನು ಆರಿಸಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸನ್ಮಾರ್ಗ ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದು ಸನ್ಮಾರ್ಗ ಸಂಪಾದಕ ಮಂಡಳಿ ತಿಳಿಸಿದೆ.