ದಲಿತ ಚೇತನ ಪ್ರೊ.ಕೃಷ್ಣಪ್ಪ ಜನ್ಮದಿನಾಚರಣೆ
ಮಂಗಳೂರು, ಜು.21: ದಲಿತ ಸಮಾಜದ ಏಳಿಗೆಗೆ ಪ್ರೊ.ಕೃಷ್ಣಪ್ಪ ಅವರ ಶ್ರಮ ಅಪಾರ. ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಸೀಯರ ಬೆತ್ತಲೆ ಸೇವೆಯನ್ನು ನಿಲ್ಲಿಸುವಂತೆ ತಿಳಿಹೇಳಿ ಜಾಗೃತಿ ಮೂಡಿಸಿದ ಕೀರ್ತಿ ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಶಿವಮೊಗ್ಗ ಜಿಲ್ಲಾ ಸಂಚಾಲಕ ಹಾಲೇಶಪ್ಪ ಹೇಳಿದರು.
ನಗರದ ಎನ್ಜಿಒ ಸಭಾಂಗಣದಲ್ಲಿ ರವಿವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ನೂತನ ಕಚೇರಿ ಉದ್ಘಾಟನೆ ಹಾಗೂ ದಲಿತ ಚೇತನ ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತಿಹಾಸವನ್ನು ಅರಿಯದವರು ಇತಿಹಾಸ ನಿರ್ಮಿಸಲಾರರು ಎನ್ನುವ ಬಾಬಾಸಾಹೇಬರ ಮಾತು ನಮ್ಮ ಇತಿಹಾಸದ ಕಡೆಗೆ ನೋಡುವಂತೆ ಮಾಡುತ್ತದೆ. ಮನುವಾದದ ಹೆಸರಿನಲ್ಲಿ ಮೇಲ್ವರ್ಗದವರು ಮೌಢ್ಯಗಳನ್ನು ಬಿತ್ತುತ್ತಾ ಬಂದಿದ್ದಾರೆ. ನಾವು ಯಾವುದನ್ನೂ ಪ್ರಶ್ನೆ ಮಾಡದೆ ಮೂಕಪ್ರೇಕ್ಷಕರಾಗಿರುವುದರಿಂದ ವೌಢ್ಯ ಹೆಚ್ಚುತ್ತದೆ. ಪ್ರೊ.ಬಿ. ಕೃಷ್ಣಪ್ಪ ಕರ್ನಾಟಕದಲ್ಲಿ ಜನಿಸಿರದಿದ್ದರೆ ಇಲ್ಲಿನ ದಲಿತರ ಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು ಎಂದು ಹಾಲೇಶಪ್ಪ ನುಡಿದರು.
ರಾಜ್ಯ ದಸಂಸ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಕಚೇರಿ ಉದ್ಘಾಟಿಸಿ ಮಾತನಾಡಿದರು. ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್., ಕಾಸರಗೋಡು ಅಂಬೇಡ್ಕರ್ ಫೌಂಡೇಶನ್ನ ಆನಂದ, ಜಿಲ್ಲಾ ಸಂಘಟನಾ ಸಂಚಾಲಕ ಸದಾಶಿವ ಉರ್ವಸ್ಟೋರ್, ಗಂಗಾಧರ ಆದ್ಯಪಾಡಿ, ಆನಂದ ಹೊಸ್ಮಠ, ಎಸ್.ಎಸ್.ಪಡು ಮಾರ್ನಾಡು, ನಾಗೇಶ್ ಮುಲ್ಲಕಾಡು, ಜಿಲ್ಲಾ ಖಜಾಂಚಿ ಶ್ರೀಧರ ಕಳೆಂಜ, ಬೆಳ್ತಂಗಡಿ ತಾಲೂಕು ಸಂಚಾಲಕ ನೇಮಿರಾಜ್ ಕಿಲ್ಲೂರು, ಕಡಬ ತಾಲೂಕು ಸಂಚಾಲಕಿ ಸುಂದರಿ ಸುರೇಶ್, ಮಂಗಳೂರು ತಾಲೂಕು ಸಂಚಾಲಕ ಸೂರ್ಯಪ್ರಕಾಶ್ ಮುಲ್ಕಿ ಉಪಸ್ಥಿತರಿದ್ದರು.