ವಿದ್ಯುತ್ ಕಂಬಗಳಿಗೆ ಕಾರು ಢಿಕ್ಕಿ: ಮೆಸ್ಕಾಂಗೆ ನಷ್ಟ
ಕುಂದಾಪುರ, ಜು.21: ಕೋಟೇಶ್ವರ ರಾಜಲಕ್ಷ್ಮೀ ಪೆಟ್ರೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜು.20ರಂದು ಬೆಳಗ್ಗೆ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂಗೆ ಸಾವಿರಾರು ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಅನಿಲ್ ಬುತೆಲೋ ಎಂಬವರ ಕಾರು ನಿಯಂತ್ರಣ ತಪ್ಪಿರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಬಳಿಕ ಕಾರು ಬದಿಯ ರಸ್ತೆಯನ್ನು ದಾಟಿ ಅಲ್ಲಿದ್ದ ಇನ್ನೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಂಬಗಳು ಹಾಗೂ ಇತರ ಸಾಮಾಗ್ರಿಗಳು ಹಾನಿಗೊಂಡಿದ್ದು, ಮೆಸ್ಕಾಂ ಸಂಸ್ಥೆಗೆ 75,000ರೂ. ನಷ್ಟ ಉಂಟಾಗಿದೆ.
ಈ ಅಪಘಾತದಿಂದ ಕ್ರೇಟಾ ಕಾರು ಜಖಂಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ನಡೆಸುತ್ತಿರುವ ನವಯುಗ ಕಂಪೆನಿಗೆ ಸೇರಿದ ಸೊತ್ತುಗಳು ಕೂಡ ಹಾನಿಯಾಗಿವೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story