ಸಿಐಟಿಯು ಉಳ್ಳಾಲ ವಲಯ ಸಮ್ಮೇಳನ
ಮಂಗಳೂರು, ಜು.21: ಸಿಐಟಿಯು ಉಳ್ಳಾಲ ವಲಯ ಸಮ್ಮೇಳನವು ರವಿವಾರ ಕುತ್ತಾರಿನ ಮುನ್ನೂರು ಯುವಕ ಮಂಡಲದಲ್ಲಿ ಜರುಗಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ. ಬಾಲೃಷ್ಣ ಶೆಟ್ಟಿ ಕಳೆದ 5 ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿದ ನರೇಂದ್ರ ಮೋದಿ ಸರಕಾರದ ಬಗ್ಗೆ ಜನತೆಯಲ್ಲಿ ಭಾರೀ ಆಕ್ರೋಶವಿತ್ತು. ಮತ್ತೆ ಅಧಿಕಾರಕ್ಕೇರುವುದೇ ಕಷ್ಟಸಾಧ್ಯವೆಂದಾಗ ಪುಲ್ವಾಮಾ ದಾಳಿ ನಡೆಸಿ ಸೈನಿಕರನ್ನು ಬಲಿ ಕೊಟ್ಟು ದೇಶಪ್ರೇಮದ ಉನ್ಮಾದವನ್ನು ಸೃಷ್ಟಿಸಿ ಅಬ್ಬರದ ಪ್ರಚಾರ ನಡೆಸಿ ಯುವಕರಲ್ಲಿ ಭಾರೀ ಭ್ರಮೆಯನ್ನು ಮೂಡಿಸಿ ನರೇಂದ್ರ ಮೋದಿ ಸರಕಾರವು ಮತ್ತೊಮ್ಮೆ ಅಧಿಕಾರಕ್ಕೇರುವಲ್ಲಿ ಈ ದೇಶದ ಬಂಡವಾಳಶಾಹಿಗಳ ಪಾತ್ರ ಎದ್ದು ಕಾಣುತ್ತಿದೆ ಎಂದರು.
ನೋಟು ರದ್ದತಿ, ಜಿಎಸ್ಟಿಯಿಂದಾಗಿ ಲಕ್ಷಾಂತರ ಕೈಗಾರಿಕೆಗಳು ಮುಚ್ಚಲ್ಪಟ್ಟಿದ್ದು ಕಾರ್ಮಿಕರ ಬದುಕು ಸಂಕಷ್ಟಮಯವಾಗಿದೆ. ಬ್ಯಾಂಕುಗಳ ವಿಲೀನ, ರೈಲ್ಚೆ,ರಕ್ಷಣೆ ಖಾಸಗೀಕರಣ, ಕಾರ್ಮಿಕರ ಕಾನೂನು ತಿದ್ದುಪಡಿಗಳು, ಬಂಡವಾಳಿಗರ ಲಾಭ ಹೆಚ್ಚಿಸಲೇ ಹೊರತು ಕಾರ್ಮಿಕರ ಉದ್ದಾರಕ್ಕಲ್ಲ. ಎರಡನೆ ಬಾರಿಗೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು ತೀವ್ರವಾಗಿ ಜಾರಿಗೊಳಿಸುವ ಮೂಲಕ ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಜೆ.ಬಾಲಕೃಷ್ಣ ಶೆಟ್ಟಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಭಾಗವಹಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಉಳ್ಳಾಲ ವಲಯಾಧ್ಯಕ್ಷ ಕೃಷ್ಣಪ್ಪಸಾಲ್ಯಾನ್ ವಹಿಸಿದ್ದರು.
ವೇದಿಕೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಉಳ್ಳಾಲ ವಲಯ ಕಾರ್ಯದರ್ಶಿ ಜಯಂತ ನಾಯಕ್, ಸಿಐಟಿಯು ಮುಖಂಡರಾದ ವಿಲಾಸಿನಿ ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ಸುಂದರ ಕುಂಪಲ, ಡಿವೈಎಫ್ಐ ಜಿಲ್ಲಾ ನಾಯಕ ನಿತಿನ್ ಕುತ್ತಾರ್ ಉಪಸ್ಥಿತರಿದ್ದರು.