ಮಣಿಪಾಲ: ವಸ್ತ್ರ ವಿನ್ಯಾಸ ತರಬೇತಿ ಸಮಾರೋಪ
ಮಣಿಪಾಲ ಜು.23: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಸಿಂಡಿಕೇಟ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಒಂದು ತಿಂಗಳ ಕಾಲ ನಡೆದ ವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭ ಇತ್ತೀಚೆಗೆ ಶಿವಳ್ಳಿಯ ಬಿವಿಟಿಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ ವಲಯ ಕಛೇರಿಯ ಮಹಾಪ್ರಬಂಧಕ ಭಾಸ್ಕರ ಹಂದೆ ಮಾತನಾಡಿ, ತರಬೇತಿ ವೇಳೆ ನಿಮಗೆ ನೀಡಲಾದ ಮಾಹಿತಿಗಳನ್ನು ಸದುಪಯೋಗಪಡಿಸಿಕೊಂಡು ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸಿ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಲ್ಲದೇ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಗಳನ್ನು ವಿತರಿಸಿದರು.
ಒಂದು ತಿಂಗಳು ನಡೆದ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಾದ ರಮ್ಯ, ಚೈತ್ರ, ನಿಖಿತ, ಸಂಗೀತ ಹಾಗೂ ಪುಷ್ಪ ಇವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮಹಿಳಾ ಅಭಿವೃದ್ಧಿ ನಿಗಮದ ಚಂದ್ರಿಕಾ, ಖಾದಿ ಗ್ರಾಮೋದ್ಯೋಗದ ಅಧಿಕಾರಿ ವಿದ್ಯಾ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಗಿರಿಧರ ಗಾಣಿಗ ಮಾತನಾಡಿ, ಮಹಿಳೆಯರಿಗೆ ತಮ್ಮ ಇಲಾಖೆಯಲ್ಲಿ ಸ್ವ-ಉದ್ಯೋಗಕ್ಕೆ ದೊರಕುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಬಿವಿಟಿಯ ಸಲಹೆಗಾರ ನಿತ್ಯಾನಂದ ಬರ್ಣೆಕರ್ ಬ್ಯಾಂಕಿನ ವಿವಿಧ ಖಾತೆಗಳ ಬಗ್ಗೆ ಹಾಗೂ ಉದ್ಯೋಗಕ್ಕೆ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮುಕ್ತಾ ಶ್ರೀನಿವಾಸ ಭಟ್, ರಾಘುವೇಂದ್ರ ಅವರು ಮಾಹಿತಿ ಗಳನ್ನು ನೀಡಿದರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಬಿವಿಟಿ ಆಡಳಿತಾಧಿಕಾರಿ ಐ.ಜಿ.ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.