ವಿದ್ಯುತ್ ಶಾಕ್, ಓರ್ವ ಮೃತ್ಯು
ಹೆಬ್ರಿ, ಆ.1: ಕಬ್ಬಿನಾಲೆ ಗ್ರಾಮದ ಕುಚ್ಚೂರಿನ ಹಿಂಡು ಎಂಬಲ್ಲಿ ಗಾಳಿ ಮಳೆಗೆ ತುಂಡಾದ ವಿದ್ಯುತ್ ಕಂಬವನ್ನು ಸರಿಪಡಿಸಲು ತೆರಳಿದ್ದ ಎಲೆಕ್ಟ್ರಿಕಲ್ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುವ ಕೆಲಸಗಾರರ ತಂಡ, ವಾಲಿಕೊಂಡಿದ್ದ ವಿದ್ಯುತ್ ಕಂಬವನ್ನು ಬೀಳಿಸಲು ಮುಂದಾದಾಗ ಅಕಸ್ಮಿಕವಾಗಿ ವಿದ್ಯುತ್ ತಂತಿ ಎಚ್ಟಿ ವಯರ್ಗೆ ತಾಗಿದ ಪರಿಣಾಮ ಮೂವರಿಗೆ ಶಾಕ್ ಹೊಡೆದಿದ್ದು ಇವರಲ್ಲಿ ಒಬ್ಬ ಮೃತಪಟ್ಟ ಘಟನೆ ಬುಧವಾರ ಅಪರಾಹ್ನ 2:30ರ ಸುಮಾರಿಗೆ ನಡೆದಿದೆ.
ಗುರುರಾಜ್, ಪುರುಷೋತ್ತಮ್ ಹಾಗೂ ಹೇಮಂತ್ ಎಂಬವರಿಗೆ ಇದರಿಂದ ವಿದ್ಯುತ್ ಶಾಕ್ ಹೊಡೆದಿದ್ದು, ಇವರನ್ನು ಹೆಬ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆ ಗುರುರಾಜ್ ಎಂಬವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಉಳಿದಿಬ್ಬರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತಿದ್ದಾರೆ.
ಈ ಘಟನೆಗೆ ಲೈನ್ಮೆನ್ ರಾಜು, ಗುತ್ತಿದಾರ ಶ್ರೀನಿವಾಸ ಹೆಬ್ಬಾರ್ ಹಾಗೂ ಮೆಸ್ಕಾಂ ಇಲಾಖೆಯ ಸೆಕ್ಷನ್ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಲಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.