ಭಟ್ಕಳ: ಎರಡು ದಿನಗಳ ಮಳೆಗೆ ಹೆಸ್ಕಾಂ ಇಲಾಖೆ 12 ಲಕ್ಷ ರೂ. ಹಾನಿ
ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರವೂ ಶಾಲೆಗಳಿಗೆ ರಜೆ
ಭಟ್ಕಳ: ಕಳೆದ ಮೂರ್ನಾಲ್ಕು ದಿನಗಳಿಂದ ಬಿರುಗಾಳಿಯಿಂದ ಕೂಡಿದ ಮಳೆಯಿಂದಾಗಿ ಭಟ್ಕಳ ತಾಲೂಕಿನಾದ್ಯಂತ ಸುಮಾರು 44 ವಿದ್ಯುತ್ ಕಂಬ ಹಾಗೂ ಪರಿವರ್ತಕಗಳು ಹಾನಿಗೊಳಗಾಗಿದ್ದು ಅಂದಾಜು 12 ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ಹೆಸ್ಕಾಂ ಇಲಾಖೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಆ. 6 ರಂದು ಮಧ್ಯಾಹ್ನದಿಂದ ಆ.7ರ ಬೆಳಗ್ಗೆ 10.30ರವರೆಗೆ ಸುಮಾರು 21ಕಂಬಗಳು (ಎಸ್ ಎಸ್ ಕಾಮತ್ 1, ಗಂಜಿಗೇರಿ 1, ಗೊರಿಕಲ್ 3, ಮುಂಡಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ 2, ಕಟಗಾರಕೊಪ್ಪ 4, ಬೆದ್ರಮಣಿ 2, ಅಗ್ಗಾ 4, ಕಾಮೇಶ್ವರಿ 4 ಹಾಗೂ 3 ಪರಿವರ್ತಕ, ಹಾನಿಗೊಳಗಾಗಿದ್ದು, ಒಟ್ಟೂ 5.3ಲಕ್ಷಗಳು ಹಾನಿ ಉಂಟಾಗಿದೆ. ಎರಡು ದಿನದಲ್ಲಿ 44 ಸಂಖ್ಯೆಯ ಕಂಬ ಹಾಗೂ ಪರಿವರ್ತಕಗಳು ಸೇರಿ ಸುಮಾರು 12 ಲಕ್ಷ ಹಾನಿ ಆಗಿರುತ್ತದೆ. ವಿದ್ಯುತ್ ಪುನರ್ ಸಂಪರ್ಕ ನೀಡುವ ಕಾರ್ಯವೂ ಚಾಲ್ತಿಯಲ್ಲಿರುತ್ತದೆ. ಎಂದು ಹೆಸ್ಕಾಂ ಇಲಾಖೆಯ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಟ್ಕಳ ತಾಲೂಕಿನ ತಲಗೋಡ ಗ್ರಾಮದಲ್ಲಿ ಸುರಿದ ಭಾರಿ ಮಳೆ ಗಾಳಿಗೆ ತಲಗೋಡ ಗ್ರಾಮದ ನಿವಾಸಿಯಾದ ಮಂಜುನಾಥ ಗಣಪತಿ ಆಚಾರಿ ಇವರ ವಾಸ್ತವದ ಮನೆಯ ಮೇಲೆ ಕಾಡು ಜಾತಿಯಾ ಮರ ಬಿದ್ದು 5000 ರೂ. ಹಾನಿ ಆಗಿರುತ್ತದೆ. ಯಾವುದೇ ಜನ ಜಾನುವಾರುಗಳಿಗೆ ತೊಂದರೆ ಆಗಿರುವುದಿಲ್ಲ. ತಾಲ್ಲೂಕಿನ ಹೆಬಳೆ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಸುರಿದ ಭಾರಿ ಮಳೆ ಗಾಳಿಗೆ ಸೈಯದ್ ರಪಿಕ್ ಸೈಯದ್ ಹುಸೇನ್ ಇವರ ಮನೆಯ ಮೇಲೆ ಮರ ಬಿದ್ದು 3000 ರೂ. ಹಾನಿಯಾಗಿರುತ್ತದೆ. ಮತ್ತು ದೇವಿದಾಸ ರಾಮ ನಾಯ್ಕ್ ಇವರ ಮನೆಯ ಹಂಚು ಮತ್ತು ಸಿಮೆಂಟ್ ಸಿಟು ಹಾರಿ ಹೊಗಿದ್ದು ಅಂದಾಜು 3000 ರೂ. ಹಾನಿಯಾಗಿರುತ್ತದೆ.
ಕೈಕಿಣಿ ಗ್ರಾಮದ ಮಠದಹಿತ್ಲು ಮಜರೇಯ ನಿವಾಸಿ ತಿಮ್ಮು ಗೊಯ್ಡಾ ಮೊಗರ್ ಇವರಾ ವಾಸ್ತವ್ಯದ ಮನೆಯು ಗಾಳಿ ಮಳೆಗೆ ಪೂರ್ತಿ ಕುಸಿದು ಬಿದ್ದಿದ್ದು ಹಾನಿಯಾ ಅಂದಾಜು ಮೊತ್ತ 81000 ರೂ. ಎಂದು ಅಂದಾಜಿಸಲಾಗಿದೆ. ಇದೇ ಗ್ರಾಮದ ನಾಗಮ್ಮ ಧರ್ಮ ಮೊಗರ್ ಇವರ ಮನೆ ಮೆಲೆ ಮಾರ ಬಿದ್ದು 8000 ರೂ ಹಾನಿಯಾಗಿದೆ. ಕಂಬ್ಲೂರ್ ಮಜರೆಯ ನಾರಾಯಣ್ ಮಾಸ್ತಿ ದೇವಾಡಿಗ ಇವರ ಮನೆ ಗೋಡೆ ಕುಸಿದು 20000 ರೂ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಗುರುವಾರವೂ ಶಾಲೆಗಳಿಗೆ ರಜೆ
ಮಳೆಯಿಂದಾಗಿ ತಾಲೂಕಿನಾದ್ಯಂತ ಹಲವು ಗ್ರಾಮಗಳು ಸಂಪರ್ಕವನ್ನು ಕಡಿದುಕೊಂಡಿದ್ದು ಆ.6 ಮತ್ತು 7 ರಂದು ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿತ್ತು. ಬುಧವಾರವೂ ಮಳೆ ಹಾಗೂ ಬಿರುಗಾಳಿ ಉಂಟಾಗಿರುವ ಪರಿಣಾಮ ಅತಿವೃಷ್ಟಿಯಿಂದಾಗಿ ಹಲವು ಕಡೆ ನೀರಿನ ಪ್ರವಾಹ ಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಕೆ.ಹರೀಶ್ ಕುಮಾರ್ ಉತ್ತರಕನ್ನಡ ಕಾರವಾರ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಗುರುವಾರವೂ ರಜೆಯನ್ನು ಘೋಷಿಸಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.