ಪುತ್ತೂರು: ಕೆನರಾ ಬ್ಯಾಂಕ್ ಉದ್ಯೋಗಿ ನಾಪತ್ತೆ
ಪುತ್ತೂರು : ನಗರದ ನೆಲ್ಲಿಕಟ್ಟೆ ಅಕ್ಷಯ ಬಿಲ್ಡಿಂಗ್ ನಿವಾಸಿ, ಬಂಟ್ವಾಳದ ಕೆನರಾ ಬ್ಯಾಂಕಿನಲ್ಲಿ ಕ್ಲರ್ಕ್ ಆಗಿ ಉದ್ಯೋಗದಲ್ಲಿದ್ದ ಬಾಲಕೃಷ್ಣ ನಾಯ್ಕ್ (59) ಎಂಬವರು ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.
ಬಾಲಕೃಷ್ಣ ನಾಯ್ಕ್ ಅವರು ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಶೋಭಾ ಬಾಲಕೃಷ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳದ ಕೆನರಾ ಬ್ಯಾಂಕಿನಲ್ಲಿ ಕ್ಲರ್ಕ್ ಆಗಿ ಉದ್ಯೋಗದಲ್ಲಿರುವ ಪತಿಯೊಂದಿಗೆ ತಾನು ಕಳೆದ ಜುಲೈ 23ರಂದು ಪರ್ಕಳ ಎಂಬಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ಜುಲೈ 29ರಂದು ಬೆಳಗ್ಗೆ ಹಿಂತಿರುಗಿ ಪುತ್ತೂರಿಗೆ ಬಂದ ವೇಳೆ ಬ್ಯಾಂಕಿಗೆ ಕರ್ತವ್ಯಕ್ಕೆಂದು ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮರುದಿನ ಬ್ಯಾಂಕಿನಲ್ಲಿ ವಿಚಾರಿಸಿದಾಗ ಜುಲೈ29ರಂದು ಸಂಜೆ 5ಗಂಟೆಗೆ ಬಾಲಕೃಷ್ಣ ನಾಯ್ಕ್ ಅವರು ಬ್ಯಾಂಕಿನಿಂದ ಪುತ್ತೂರಿಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಅದೇ ದಿನ ಸಂಜೆ 7ಗಂಟೆಯ ವೇಳೆಗೆ ಸಂಬಂಧಿಕರಾದ ಬೆಟ್ಟಂಪಾಡಿಯ ಕಜೆ ನಿವಾಸಿ ಸುಧೀರ್ಕುಮಾರ್ ಎಂಬವರು ಬಾಲಕೃಷ್ಣ ನಾಯ್ಕ್ ಅವರು ಪುತ್ತೂರು ಬಸ್ ನಿಲ್ದಾಣದ ಸಮೀಪ ಬಸ್ಸೊಂದರಲ್ಲಿರುವುದನ್ನು ನೋಡಿದ್ದಾರೆ. ಆದರೆ ಅವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಶೋಭಾ ಅವರು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಾಹಿತಿ ನೀಡಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.