ಫರಂಗಿಪೇಟೆ: ರಸ್ತೆ ಅಪಘಾತ; ಗಾಯಾಳು ಬಾಲಕ ಮೃತ್ಯು
ಬಂಟ್ವಾಳ, ಆ. 11: ಫರಂಗಿಪೇಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗಿದೇ ರವಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇಲ್ಲಿನ ಬೊಳ್ಳಾಯಿ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮುಹಮ್ಮದ್ ಗಝ್ಝಾಲಿ (6) ಮೃತಪಟ್ಟ ಬಾಲಕ. ಇಸ್ಮಾಯಿಲ್ ಅವರು ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಫರಂಪೇಟೆಯಲ್ಲಿ ಅಪಘಾತ ಸಂಭವಿಸಿತ್ತು. ಪರಿಣಾಮ ಬಾಲಕನ ತಲೆಗೆ ಹಾಗೂ ಇಸ್ಮಾಯಿಲ್ ಅವರಿಗೂ ಗಾಯಗಳಾಗಿತ್ತು, ಬಳಿಕ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗಝ್ಝಾಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿರುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿರುವ ಇಸ್ಮಾಯಿಲ್ ಬಂಟ್ವಾಳದಲ್ಲಿ ನೆಲೆಸಿದ್ದು, ಇವರ ಮೂರು ಮಕ್ಕಳ ಪೈಕಿ ಮೊದಲಿಗನಾದ ಗಝ್ಝಾಲಿ, ಕೌಡೇಲು ದಾರುಲ್ ಇಝ್ಝಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್ಕೆಜಿ ವಿದ್ಯಾರ್ಥಿ. ಇವರ ಅಕಾಲಿಕ ಮರಣಕ್ಕೆ ಕೌಡೇಲು ಶಾಲೆಯ ಮುಖ್ಯ ಶಿಕ್ಷಕ ಸಿನಾನ್ ಅಝ್ಹರಿ ಕಲ್ಲಡ್ಕ ಸಂತಾಪ ಸೂಚಿಸಿದ್ದಾರೆ.