ಪ್ರಧಾನಿ, ಮುಖ್ಯಮಂತ್ರಿ, ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಸಂದೇಶ ರವಾನಿಸಿದ ಅರೋಪ: ಸರಕಾರಿ ಉದ್ಯೋಗಿ ಸೆರೆ
ಕಡಬ, ಆ.17. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೆಸ್ಸೆಸ್ ವಿರುದ್ಧ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ ಅರೋಪದಡಿ ಕಡಬ ತಾಲೂಕು ಭೂಮಾಪನ ಇಲಾಖೆಯ ಸಿಬ್ಬಂದಿ ಮಹೇಶ್ ಎಂಬಾತನನ್ನು ಕಡಬ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಮಹೇಶ್ ಕೀಳು ಮಟ್ಟದ ಪದಗಳನ್ನು ಬಳಕೆ ಮಾಡಿ ಅವಹೇಳನಕಾರಿ ಸಂದೇಶಗಳನ್ನು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದ ಎಂದು ಹಿಂದೂ ಜಾಗರಣ ವೇದಿಕೆ ಕಡಬ ಮುಖಂಡ ವೆಂಕಟ್ರಮಣ ಕೋಡಿಂಬಾಳ ಎಂಬವರು ಕಡಬ ಪೊಲೀಸ್ ಠಾಣೆಗೆ ಮಹೇಶ್ ವಿರುದ್ಧ ದೂರು ನೀಡಿದ್ದರು.
ಮಹೇಶ್ ಕಳೆದ ಕೆಲ ಸಮಯದಿಂದ ತಾನು ಓರ್ವ ಸರಕಾರಿ ಉದ್ಯೋಗಿ ಎನ್ನುವುದನ್ನು ಕೂಡ ಮರೆತು ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ತನ್ನ ಫೇಸ್ಬುಕ್ ಖಾತೆ ಹಾಗೂ ವಾಟ್ಸ್ಅಪ್ ಸ್ಟೇಟಸ್ ಗಳಲ್ಲಿ ಹಾಕಿಕೊಳ್ಳುತ್ತಿದ್ದು, ಮಹೇಶ್ನನ್ನು ಸೇವೆಯಿಂದ ವಜಾಗೊಳಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆಯ ಮುಖಂಡರು ಒತ್ತಾಯಿಸಿದ್ದು, ತಪ್ಪಿದಲ್ಲಿ ಕಡಬ ತಾಲೂಕು ಬಂದ್ಗೆ ಕರೆ ನೀಡಿ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಕಡಬ ಪೊಲೀಸರು ಭೂಮಾಪನ ಇಲಾಖಾ ಸಿಬ್ಬಂದಿ ಮಹೇಶ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.