ಬೆಳುವಾಯಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ
ರೂ. 26,000 ಮೌಲ್ಯದ ಪುಸ್ತಕ ಹಸ್ತಾಂತರ
ಮೂಡುಬಿದಿರೆ : ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ವಲಯ, ಸಮೂಹ ಸಂಪನ್ಮೂಲ ಕೇಂದ್ರ ಬೆಳುವಾಯಿ ಇದರ ವತಿಯಿಂದ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಬೆಳುವಾಯಿ ಚರ್ಚ್ ಇಲ್ಲಿ ಸೋಮವಾರ "ಪ್ರತಿಭಾ ಕಾರಂಜಿ-2019-20" ಕಾರ್ಯಕ್ರಮವು ನಡೆಯಿತು.
ಜಿ.ಪಂ ಸದಸ್ಯೆ ಕೆ.ಪಿ.ಸುಜಾತ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಪೂರಕ. ಪ್ರತಿಭೆಯ ಜತೆಗೆ ವಿದ್ಯಾರ್ಥಿಗಳಲ್ಲಿ ನೈತಿಕತೆಯು ಬೆಳೆಯಬೇಕೆಂದ ಅವರು ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿ ಬೇಕಾಗಿದೆ ಎಂದರು.
ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಸೋಮನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಚಿತ್ರನಟ ಶರಣ್ ಕೈಕಂಬ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ನಿಂದ ದೂರ ಇರಿ. ಹೆತ್ತವರ ಆಸೆಗಳನ್ನು ಈಡೇರಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿ ಎಂದು ಸಲಹೆ ನೀಡಿದರು.
ಪುಸ್ತಕ ಸಾಮಾಗ್ರಿ ಹಸ್ತಾಂತರ : ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಬೆಳುವಾಯಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಂದ ಸಂಗ್ರಹವಾಗಿರುವ ಸುಮಾರು 26,000 ಮೌಲ್ಯದ ಪುಸ್ತಕ ಸಾಮಾಗ್ರಿಗಳನ್ನು ಜಿಲ್ಲಾಧಿಕಾರಿ ಕಛೇರಿಗೆ ತಲುಪಿಸಲು ಜಿ.ಪಂ ಸದಸ್ಯೆ ಕೆ.ಪಿ.ಸುಜಾತ ಅವರ ಮೂಲಕ ಹಸ್ತಾಂತರಿಸಲಾಯಿತು.
ಗ್ರಾ.ಪಂ ಉಪಾಧ್ಯಕ್ಷೆ ರಮಣಿ ಆಳ್ವ, ಚಿತ್ರನಟ ಹರೀಶ್ ಕಡಂದಲೆ, ರಾಜ್ಯ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶಿರೂರು, ತಾಲೂಕು ದೈ.ಶಿ.ಶಿ.ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಅತಿಥಿಗಳಾಗಿ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಝೀರ್ ಅಹಮ್ಮದ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಇಂದಿರಾ ನಾಯ್ಕ್ ಉಪಸ್ಥಿತರಿದ್ದರು.
ಸಿ.ಆರ್.ಪಿ ಪ್ರಸನ್ನ ಶೆಣೈ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ಎಂ.ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಬೊಮ್ಮಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ತಾರಾ.ವಿ.ಶೆಟ್ಟಿ ವಂದಿಸಿದರು.