ದಿಡುಪೆ ಭೂ ಕುಸಿತ ಪ್ರದೇಶಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
ಬೆಳ್ತಂಗಡಿ: ಪ್ರವಾಹ ಸಂತ್ರಸ್ತರಿಗೆ ಸೂಕ್ತ ವಸತಿ ಹಾಗೂ ಅವಶ್ಯ ವಸ್ತು ಪೂರೈಸುವ ನಿಟ್ಟಿನಲ್ಲಿ ದ.ಕ.ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಬುಧವಾರ ಬೆಳ್ತಂಗಡಿಗೆ ಭೇಟಿ ನೀಡಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ದಿಡುಪೆಯಲ್ಲಿ ಭೂ ಕುಸಿತ ಉಂಟಾದ ಪ್ರದೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಸಿ ಮಂದಿರಲ್ಲಿ ತಾಲೂಕಿನ ನೆರೆ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯದ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಜತೆಗೆ ಸಂತ್ರಸ್ತರಿಗೆ ಸೂಕ್ತ ರೀತಿಯ ಸ್ಪಂದನೆ ನೀಡುವಂತೆ ಸೂಚಿಸಿದರು.
ದಿಡುಪೆ ಸಮೀಪದ ಗಣೇಶ್ ನಗರದಲ್ಲಿ ಭೂ ಕುಸಿತ ಉಂಟಾದಲ್ಲಿ ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅನಾರು ಸಂಪರ್ಕ ಸೇತುವೆ ಕುಸಿದಿದ್ದರಿಂದ ಅಗತ್ಯವಾಗಿ ಸಂಪರ್ಕ ಕಲ್ಪಿಸಲು ಮುಂಡಾಜೆಯಿಂದ ಕಾನರ್ಪವಾಗಿ 3ಕಿ.ಮೀ. ಒಳ ರಸ್ತೆ ಸಿದ್ಧಗೊಳ್ಳುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ.ಕೃಷ್ಣಮೂರ್ತಿ, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ವಿಶೇಷ ನೋಡೆಲ್ ಅಧಿಕಾರಿಗಳಾದ ಸಂತೋಷ್ ಹಾಗೂ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಗಳು ಉಪಸ್ಥಿತರಿದ್ದರು.