ಮಂಜೇಶ್ವರ ಕ್ಷೇತ್ರದಲ್ಲಿ 2006ರ ಫಲಿತಾಂಶ ಪುನರಾವರ್ತನೆ: ಎಡರಂಗ ವಿಶ್ವಾಸ
ಕೇರಳ ವಿಧಾನಸಭಾ ಚುನಾವಣೆ
ಕಾಸರಗೋಡು, ಮೇ 6: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗ ಅಭ್ಯರ್ಥಿ ಸಿ.ಎಚ್. ಕುಂಞಂಬು ಗೆಲುವು ಖಚಿತ ಎಂದು ಎಡರಂಗ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ ಪಕ್ಷದ ಮುಖಂಡರು, ಈ ಬಾರಿ 2006ರ ಫಲಿತಾಂಶ ಪುನರಾ ವರ್ತನೆಯಾಗಲಿದೆ. ಕಳೆದ ಐದು ವರ್ಷಗಳಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕುಂಠಿತವಾಗಿದೆ. ಸಿ.ಎಚ್. ಕುಂಞಂಬು ಶಾಸಕರಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಮಂಜೇಶ್ವರ ಚೆಕ್ಪೋಸ್ಟ್ನಿಂದ ಹಿಡಿದು ಕುಂಬಳೆ ಐಎಚ್ಆರ್ಡಿ ಕಾಲೇಜು ಯೋಜನೆ ಸ್ಥಗಿತಗೊಂಡಿದೆ. ಈಗ ಎಡರಂಗ ಪರ ಒಲವು ಕಂಡು ಬರುತ್ತಿದೆ. ಇದರಿಂದ ಎಡರಂಗ ಅಚ್ಚರಿಯ ಗೆಲುವು ಸಾಧಿಸಲಿದೆ ಎಂದರು. ಐಕ್ಯರಂಗ ಮತ್ತು ಬಿಜೆಪಿ ಅತೃಪ್ತರ ಮತಗಳು ಎಡರಂಗಕ್ಕೆ ಲಭಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ವಿ.ಪಿ.ಪಿ. ಮುಸ್ತಾಫ, ಬಿ.ವಿ. ರಾಜನ್, ಪಿ.ಬಿ.ಅಹ್ಮದ್, ಕೆ.ಆರ್.ಜಯಾನಂದ, ಡಾ. ಖಾದರ್, ಯಾಕೂಬ್ ಕುಂಜತ್ತೂರು, ಎಸ್.ಎಂ.ಎ. ತಂಙಳ್,ಕೆ.ಎಸ್. ಫಕ್ರುದ್ದೀನ್, ಅಬ್ದುರ್ರಝಾಕ್ ಚಿಪ್ಪಾರ್, ರಘುದೇವ್ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.