ಅಕ್ರಮ ಮರಳು ಸಾಗಾಟ: ಆರೋಪಿಗಳಿಗೆ ಜಾಮೀನು
ಪುತ್ತೂರು, ಮೇ 6: ಪುತ್ತೂರು ತಾಲೂಕಿನ ಕರ್ವೇಲು ಎಂಬಲ್ಲಿ ಎ.24ರಂದು ಅಕ್ರಮ ಮರಳು ಸಾಗಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮೂವರು ಆರೋಪಿಗಳಿಗೆ ಜಿಲ್ಲಾ ಪ್ರಧಾನ ನ್ಯಾಯಾಧೀಶರ ನ್ಯಾಯಾಲಯ ಜಾಮೀನು ನೀಡಿದೆ.
ಪುತ್ತೂರು ತಾಲೂಕಿನ ಅರಿಯಡ್ಕ ನಿವಾಸಿ ಪವನ್ ಕುಮಾರ್ ಮತ್ತು ಸಂದೇಶ್ ಯಾನೆ ಸಂತೋಷ್ ಕುಮಾರ್ ಹಾಗೂ ಕಾಸರಗೋಡಿನ ಪ್ರವೀಣ್ ಕುಮಾರ್ ಜಾಮೀನು ಪಡೆದುಕೊಂಡ ಆರೋಪಿಗಳು.
ಕಳೆದ ಎ. 24ರಂದು ಮಧ್ಯರಾತ್ರಿಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಕರ್ವೇಲು ಬಳಿ ಪ್ರೊಬೆಷನರಿ ಎಎಸ್ಪಿಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದ ಉಪ್ಪಿನಂಗಡಿ ಪೊಲೀಸರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಪತ್ತೆ ಮಾಡಿ ಆರೋಪಿಗಳಾದ ಪವನ್ಕುಮಾರ್, ಸಂದೇಶ್ ಯಾನೆ ಸಂತೋಷ್ಕುಮಾರ್ ಹಾಗೂ ಪ್ರವೀಣ್ ಕುಮಾರ್ ಎಂಬವರನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳ ಪರವಾಗಿ ವಕೀಲರಾದ ಅನಿಲ್ಕುಮಾರ್ ಉಪ್ಪಿನಂಗಡಿ ಮತ್ತು ಸಂದೇಶ್ ನಟ್ಟಿಬೈಲು ಅವರು ಜಿಲ್ಲಾ ನ್ಯಾಯಾಲಯದಲ್ಲಿ ವಾದಿಸಿದ್ದರು.