ಬೆಳ್ಳಾರೆ: ಪಾಪ್ಯುಲರ್ ಫ್ರಂಟ್ ವತಿಯಿಂದ ಸಾರ್ವಜನಿಕ ಸಮಾವೇಶ
ವಿಟ್ಲ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ 'ನಿರ್ಭೀತಿಯಿಂದ ಜೀವಿಸಿ ಘನತೆಯಿಂದ ಜೀವಿಸಿ' ರಾಷ್ಟ್ರೀಯ ಅಭಿಯಾನದ ಬೆಳ್ಳಾರೆ ಡಿವಿಜನ್ ವತಿಯಿಂದ ಸಾರ್ವಜನಿಕ ಕಾರ್ಯಕ್ರಮ ಬೆಳ್ಳಾರೆಯ ರಾಜೀವ್ ಗಾಂಧಿ ಸಭಾಭವನ ದಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಷಯ ಮಂಡನೆ ಮಂಡಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಪನಾಮ ಮಾತಾನಾಡಿ ಭಾರತ ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ವ್ಯವಸ್ಥಿತವಾಗಿ ನಡೆಸುತ್ತಿರುವ ಗುಂಪು ಹತ್ಯೆ, ಗುಂಪು ಹಲ್ಲೆಗಳು, ಅನ್ಯಾಯ, ಅಕ್ರಮವನ್ನು ದೇಶಪ್ರೇಮಿಗಳು ಒಂದಾಗಿ ಎದುರಿಸಬೇಕಾಗಿದೆ ಹಾಗೂ ಸಾಂವಿಧಾನಿಕ ಹಕ್ಕನ್ನು ಉಳಿಸುವುದು ಭಾರತೀಯರಾದ ನಮ್ಮ ಜವಾಬ್ದಾರಿ ಆಗಿದೆ ಎಂದರು.
ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರದಾದ್ಯಂತ ಅಭಿಯಾನ ಹಮ್ಮಿಕೊಂಡಿದೆ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಸೈದ್ದಾಂತಿಕ ಹೋರಾಟದ ಅಗತ್ಯತೆ ಇದೆ ಇದಕ್ಕಾಗಿ ನಾವೆಲ್ಲರೂ ಸಜ್ಜಾಗಬೇಕಾಗಿದೆ ಎಂದರು.
ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಯವರು ಪ್ರಾಸ್ತಾವನೆ ಗೈದರು. ಫೈಝಲ್ ಜಿ ಪ್ರಾರ್ಥಿಸಿದರು. ಪಾಪ್ಯುಲರ್ ಫ್ರಂಟ್ ಬೆಳ್ಳಾರೆ ವಲಯ ಸಮಿತಿ ಸದಸ್ಯ ಶಫೀಕ್ ಸ್ವಾಗತಿಸಿ, ಅಧ್ಯಕ್ಷ ಬಶೀರ್ ವಂದಿಸಿದರು.