ಓಣಂ ಹಬ್ಬದಿಂದ ಸಮಾಜ ಬೆಸೆಯುವ ಕೆಲಸ: ಸಚಿವ ಕೋಟ
ಉಡುಪಿ, ಸೆ.15: ಓಣಂ ಹಬ್ಬವು ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತಿದೆ. ಸರಕಾರ ರಾಜ್ಯದಲ್ಲಿ ಅಭಿಮಾನ ಹಾಗೂ ಗೌರವದಿಂದ ಇರುವ ಕೇರಳದ ಜನತೆಯ ಪರವಾಗಿರುತ್ತದೆ ಎಂದು ರಾಜ್ಯ ಮುಜರಾಯಿ, ಮೀನು ಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಉಡುಪಿ ವತಿಯಿಂದ ಲಯನ್ಸ್ ಕ್ಲಬ್ 317ಸಿ ಜಿಲ್ಲೆಯ ಸಹಯೋಗದೊಂದಿಗೆ ರವಿವಾರ ಬನ್ನಂಜೆ ಶ್ರೀನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ 27ನೆ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೇರಳಿಗರು ವಿಶಿಷ್ಟ ಗುಣವನ್ನು ಹೊಂದಿದ್ದಾರೆ. ಇಡೀ ದೇಶದಲ್ಲಿ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕೇರಳ. ಜಗತ್ತಿನ ಮೂಲೆ ಮೂಲೆಗಳಲ್ಲೂ ಕೇರಳಿಗರು ನೆಲೆಸಿರುವುದು ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದರು.
ತುಳು ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ, ತುಳು ಹಾಸ್ಯಕ್ಕೂ ಮಲಯಾಳಂ ಹಾಸ್ಯಕ್ಕೂ ಬಹಳಷ್ಟು ಸಾಮ್ಯತೆ ಇದೆ. ಕೇರಳದ ಹಾಸ್ಯದಲ್ಲಿ ಯಾವುದೇ ನಾಟಕೀಯ ಇರಲ್ಲ. ಎಲ್ಲವೂ ನ್ಯಾಚುರಲ್ ಆಗಿರುತ್ತದೆ. ಇಂತಹ ಹಾಸ್ಯದ ಅನುಕರಣೇ ಇದೀಗ ಮ್ಮಲ್ಲಿಯೂ ನಡೆಯುತ್ತಿದೆ ಎಂದರು.
ಲಯನ್ಸ್ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ, ಮಣಿಪಾಲ ಲೈಫ್ ಸೈನ್ಸ್ ಸೆಂಟರ್ನ ಸಂಶೋಧನಾ ಪ್ರೊಫೆಸರ್ ಡಾ.ಎಂ.ಎಸ್. ವಲಿಯತ್ತನ್ ಮುಖ್ಯ ಅತಿಥಿಗಳಾಗಿದ್ದರು. ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ನ ಕೋಶಾಧಿಕಾರಿ ಪ್ರಸನ್ನರಾಜ್ ಸಿ. ಲಯನ್ಸ್ ಕ್ಲಬ್ನ ಸುಗುಣ ಕುಮಾರ್ ಉಪಸ್ಥಿತರಿದ್ದರು.
ಸೆಂಟರ್ನ ಅಧ್ಯಕ್ಷ ಪಿ.ಎ.ಮೋಹನ್ದಾಸ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ವಿ.ಕುಮಾರ್ ವರದಿ ವಾಚಿಸಿದರು. ಬಿಂದು ತಂಗಪ್ಪನ್ ಕಾರ್ಯಕ್ರಮ ನಿರೂಪಿಸಿದರು.