ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ)ಯ ಮಹಾಸಭೆ
2018-19ರಲ್ಲಿ 6,06,744.36 ನಿವ್ವಳ ಲಾಭ
ಮೂಡುಬಿದಿರೆ : ತಮ್ಮ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಕಳೆದ ಒಂದು ವರ್ಷದಲ್ಲಿ ರೂ 22,15,53,125.79 ಕೋಟಿ ಆದಾಯವಾಗಿದ್ದು ರೂ 22,09,46,381.40 ಕೋಟಿ ಖರ್ಚಾಗಿದ್ದು 6,06,744.36 ಲಕ್ಷ ಒಟ್ಟು ಲಾಭಾಂಶವನ್ನು ಗಳಿಸಿದೆ ಎಂದು ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ)ಯ ಅಧ್ಯಕ್ಷ ರಂಜಿತ್ ಪೂಜಾರಿ ತಿಳಿಸಿದ್ದಾರೆ.
ಅವರು ಇಲ್ಲಿನ ಸಮಾಜ ಮಂದಿರ ಸಭಾಭವನದಲ್ಲಿ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ)ದ 2018-19ರ ಸಾಲಿನ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಾರ್ಚ್ ಅಂತ್ಯದಲ್ಲಿ ಒಟ್ಟು 988 ಸದಸ್ಯರಿದ್ದು ಸದಸ್ಯರ ಪಾಲು ಬಂಡವಾಳ ಕಳೆದ ಸಾಲಿಗಿಂತ 66,900ರಷ್ಟು ವೃದ್ಧಿಯಾಗಿದೆ ಹಾಗೂ ದುಡಿಯುವ ಬಂಡವಾಳ ಕಳೆದ ಸಾಲಿಗಿಂತ 49,94,103ರಷ್ಟು ಜಾಸ್ತಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಮಾತನಾಡಿ ಸದಸ್ಯರಿಗೆ-ಸದಸ್ಯರಿಗಾಗಿ ಇರುವ ಸಂಸ್ಥೆ ಇದಾಗಿದ್ದು ಇಲ್ಲಿ ಗ್ರಾಹಕರಿಗೆ ನಗುಮೊಗದ ಸೇವೆ ಅಗತ್ಯವಿದೆ ಇದನ್ನು ತಿಳಿದು ಕೆಲಸ ಮಾಡಿದರೆ ಉತ್ತಮ ಎಂದು ಹೇಳಿದರು.
ಗೌರವ : ಸಂಸ್ಥೆಯು ಉತ್ತಮ ಗ್ರಾಹಕರೆಂದು ಗುರುತಿಸಿರುವ ಹತ್ತು ಮಂದಿಗೆ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸ್ವ-ಸಹಾಯ ತಂಡದ ಸದಸ್ಯರುಗಳ ಮಕ್ಕಳಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇ85ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿರುವ ವಿದ್ಯಾರ್ಥಿನಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ನಿರ್ದೇಶಕರುಗಳಾದ ರಮೇಶ್ ಶೆಟ್ಟಿ, ರವೀಂದ್ರ ಕರ್ಕೇರಾ, ಶಂಕರನಾರಾಯಣ ಭಟ್, ಹೇಮಾವತಿ, ರಾಜೇಂದ್ರ ಬಂಗೇರಾ, ನಾಗೇಶ್ ನಾಯ್ಕ್, ಶರತ್ ಜೆ.ಶೆಟ್ಟಿ ಉಪಸ್ಥಿತರಿದ್ದರು.
ರಮೇಶ್ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ರಾಜಶೇಖರ ಮಧ್ಯಸ್ಥ ಲಾಭಾಂಶ ವಿಂಗಡನೆಯ ವಿವರ ನೀಡಿದರು. ನಿರ್ದೇಶಕ ರತ್ನಾಕರ ಪೂಜಾರಿ ಬಜೆಟ್ ಮಂಡಿಸಿದರು. ಲೆಕ್ಕಿಗರಾಗಿರುವ ಪ್ರತಿಭಾ ಬಜೆಟ್ ಹೆಚ್ಚಿನ ಖರ್ಚಿನ ವಿವರ ನೀಡಿದರು. ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷೆ ಉಷಾ ಭಂಡಾರಿ ವಂದಿಸಿದರು.