ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಿಂದ ದೇಶ ಉನ್ನತಿ: ವಿಲ್ಸನ್ ರೊಡ್ರಿಗಸ್
ಶಿರ್ವ, ಸೆ.19: ಇಂದು ಜಗತ್ತಿನ ಮುಂಚೂಣಿ ರಾಷ್ಟ್ರಗಳು ಸರ್ವಾಂಗೀಣ ಪ್ರಗತಿ ಸಾಧಿಸಲು ತಮ್ಮ ಕೃಷಿ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಾಂತ್ರಿಕತೆ ಯನ್ನು ಬಳಸಿಕೊಂಡು ಯಶಸ್ವಿಯಾಗಿವೆ. ಇಂದು ಬೃಹತ್ ಕೈಗಾರಿಕೆಗಳು, ಕಂಪೆನಿಗಳು ಮುಚ್ಚುತ್ತಿದ್ದು, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದಲ್ಲಿ ನಿರುದ್ಯೋಗ ಸಮಸ್ಯೆಯ ನಿವಾರಣೆಯ ಜೊತೆಗೆ ರಾಷ್ಟ್ರದ ಉನ್ನತಿಗೂ ಪೂರಕವಾಗಲಿದೆ ಎಂದು ಉಡುಪಿ ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್ ಶಿರ್ವ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ರೋಟರಿ ಕ್ಲಬ್ ಮಣಿಪುರ, ಉಡುಪಿ ಜಿಲ್ಲಾ ಕೃಷಿಕ ಸಂಘ, ಆತ್ಮ ಅನುಷ್ಠಾನ ಸಮಿತಿ ಉಡುಪಿ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ 2019-20ನೆ ಸಾಲಿನ ಆತ್ಮ ಯೋಜನೆಯಡಿ ಮಣಿಪುರ ರೋಟರಿ ಸಭಾಭವನದಲ್ಲಿ ಗುರುವಾರ ಆಯೋಜಿಸಲಾದ ಸಮಗ್ರ ಕೃಷಿ ಪದ್ಧತಿಯಲ್ಲಿ ತಾಂತ್ರಿಕ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಮಣಿಪುರ ರೋಟರಿ ಅಧ್ಯಕ್ಷ ಕಾಮಿಲ್ ಸಿಕ್ವೇರಾ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಬಂಟಕಲ್ಲು, ತಾಪಂ ಸದಸ್ಯೆ ಸಂಧ್ಯಾ ಎಸ್.ಶೆಟ್ಟಿ ಭಾಗವಹಿಸಿದ್ದರು. ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮೋಹನ್ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಕೆವಿಕೆಯ ಕೃಷಿ ವಿಜ್ಞಾನಿಗಳಾದ ಡಾ. ನವೀನ್ ಎನ್.ಇ., ಡಾ.ಚೈತನ್ಯ ಎಚ್.ಎಸ್., ಸಹಾಯಕ ತೋಟಗಾರಿಕಾ ಅಧಿಕಾರಿ ದೀಪಾ ಕೃಷಿಕರಿಗೆ ಮಾಹಿತಿ ನೀಡಿದರು. ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಸಂಜನಾ ಶೆಟ್ಟಿ ನಿರೂಪಿಸಿ ವಂದಿಸಿದರು.