ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಆರೋಪಿ ಸೆರೆ
ಮಂಗಳೂರು, ಸೆ.19: ನಗರದ ಪಡೀಲ್ನಲ್ಲಿ ಮಂಗಳೂರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮುಹಮ್ಮದ್ ತೌಸಿಫ್ ಬಂಧಿತ ಆರೋಪಿ.
ಸಂಚಾರ ದಕ್ಷಿಣ ಪೊಲೀಸ್ ಠಾಣೆ ಪಿಎಸ್ಸೈ ಸುಕುಮಾರನ್ ಮತ್ತು ಸಿಬ್ಬಂದಿ ಮುಹಮ್ಮದ್ ಹನೀಫ್ ಇಲಾಖಾ ಸಮವಸ್ತ್ರದಲ್ಲಿ ಮಧ್ಯಾಹ್ನ 12:30ರ ಸುಮಾರು ಪಡೀಲ್ ವೃತ್ತದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಫರಂಗಿಪೇಟೆ ಕಡೆಯಿಂದ ಬಂದ ಕಾರಿನ ನಂಬರ್ ಪ್ಲೇಟ್ ದೋಷಪೂರಿತವಾಗಿರುವುದನ್ನು ಗಮನಿಸಿ ನಿಲ್ಲಿಸಲು ಸೂಚನೆ ನೀಡಿದ್ದಾರೆ.
ಆರೋಪಿ ಕಾರು ನಿಲ್ಲಿಸಿದಾಗ ದೋಷಪೂರಿತ ನಂಬರ್ ಪ್ಲೇಟ್ ಸರಿಪಡಿಸುವಂತೆ ಪೊಲೀಸರು ಹೇಳಿದ್ದಾರೆ. ಆಗ ಆರೋಪಿ ಅವಾಚ್ಯ ಶಬ್ದಗಳಿಂದ ಪಿಎಸ್ಸೈಗೆ ನಿಂದಿಸಿದ್ದಾರೆ. ಆಗ ಮುಹಮ್ಮದ್ ಹನೀಫ್ ಕಾರು ಚಾಲಕನನ್ನು ಸಮಾಧಾನಪಡಿಸಲು ಯತ್ನಿಸಿದಾಗ ಅವರ ಸಮವಸ್ತ್ರಕ್ಕೆ ಕೈ ಹಾಕಿ ಹರಿದು ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ದೂರಿನಲ್ಲಿ ತಿಳಿಸಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.