ಬ್ರಹ್ಮಾವರ: ಕೆವಿಕೆಯಲ್ಲಿ ಗಿಡ ನೆಡುವ ಕಾರ್ಯಕ್ರಮ
ಉಡುಪಿ, ಸೆ.20: ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಜಿಲ್ಲಾ ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಬೃಹತ್ ವೃಕ್ಷಾರೋಹಣ ಅಭಿಯಾನ - ಕೃಷಿಕ ಗೋಷ್ಠಿ, ಪುಷ್ಪ ಕೃಷಿಯಲ್ಲಿ ವೈಜ್ಞಾನಿಕ ಬೇಸಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಮಾತನಾಡಿ, ಉಡುಪಿ ಮಲ್ಲಿಗೆಯಲ್ಲಿ ಈ ವರ್ಷದ ಅಧಿಕ ಮಳೆಯಿಂದ ಸಾಕಷ್ಟು ರೋಗಗಳು ಕಂಡು ಬಂದಿದ್ದು, ಇದಕ್ಕೆ ಪೂರಕವಾದ ವೈಜ್ಞಾನಿಕ ಕ್ರಮವನ್ನು ನಮ್ಮ ವಿಜ್ಞಾನಿಗಳು ಕೈಗೊಂಡಿದ್ದಾರೆ. ಉಡುಪಿ ಮಲ್ಲಿಗೆಗೆ ಾರ್ಕೆಟ್ ಬೆಲೆ ಜಾಸ್ತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ಮತ್ತು ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್ ಮಾತನಾಡಿ, ಮಲ್ಲಿಗೆ ಹೂವಿನ ಬೆಳೆಗಾರರಾಗಿ ಹೂವನ್ನು ಬೆಳೆದರೆ ಮಾತ್ರ ಸಾಲದು, ಅದಕ್ಕೆ ಸರಿಯಾದ ಮಾರ್ಕೆಟ್ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ಲಾಭದಾಯಕವಾಗಿ ಹೇಗೆ ಮಾರ್ಕೆಟ್ ಮಾಡ ಬಹುದು ಎನ್ನುವ ಬಗ್ಗೆ ಚರ್ಚಿಸಿ, ಹೂವನ್ನು ಬೆಳೆದು ಅದನ್ನು ಸರಿಯಾಗಿ ಮಾರ್ಕೆಟ್ ಮಾಡು ಶಕ್ತಿ ಇರಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಬಿ. ಧನಂಜಯ ಮಾತನಾಡಿ, ಬೃಹತ್ ವೃಕ್ಷಾ ಅಂದೋಲನದ ಅಂಗವಾಗಿ ಕೆವಿಕೆಯಲ್ಲಿ ಸಾವಿರ ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ ಎಂದರು. ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಮಾತನಾಡಿ, ಉಡುಪಿ ಮಲ್ಲಿಗೆಗೆ ತುಂಬಾ ಪ್ರಾಮುಖ್ಯತೆ ಇದೆ. ಕೀಟ ಮತ್ತು ರೋಗ ಬಂದರೆ ಹೇಗೆ ಅದರ ನಿರ್ವಹಣೆಯನ್ನು ಮಾಡಬಹುದು ಎಂದು ನಾವು ತಿಳಿದು ಕೊಂಡರೆ ಮಲ್ಲಿಗೆ ಕೃಷಿಯನ್ನು ಉತ್ತಮವಾಗಿ ಮಾಡಬಹುದು ಎಂದರು.
ಕುಂದಾಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ ನಾಯ್ಕ ಉಪಸ್ಥಿತರಿದ್ದರು. ಕೆವಿಕೆ ಬ್ರಹ್ಮಾವರದ ತೋಟಗಾರಿಕೆ ವಿಜ್ಞಾನಿ ಚೈತನ್ಯ ಹೆಚ್. ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎನ್. ಈ. ನವೀನ್ ಕಾರ್ಯಕ್ರಮ ನಿರೂಪಿಸಿ ಸಹಾಯಕ ತೋಟಗಾರಿಕೆ ನಿರ್ದೇಶಕ ಗುರುಪ್ರಸಾದ್ ವಂದಿಸಿದರು.