ಕಾಪು ಐ ಎಸ್ ಪಿ ಆರ್ ಎಲ್: 2ನೇ ಘಟಕದ ಸರ್ವೇಗೆ ತಡೆ
ಕಾಪು: ಕಾಪು ಸಮೀಪದ ಮಜೂರಿನ ಪಾದೂರಿನಲ್ಲಿ ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್ಪಿಆರ್ಎಲ್ 2ನೇ ಘಟಕ ನಿರ್ಮಾಣಕ್ಕೆ ಸಂಬಂಧಿಸಿ ಪಾದೂರು-ಕಳತ್ತೂರು ಪರಿಸರದಲ್ಲಿ ಸರ್ವೇ ಕಾರ್ಯಕ್ಕೆ ಮುಂದಾದಾಗ ಸ್ಥಳೀಯರು ತಡೆಯೊಡ್ಡಿದ ಘಟನೆ ಶುಕ್ರವಾರ ನಡೆದಿದೆ.
ಶುಕ್ರವಾರ ಬೆಳಗ್ಗೆ ಸರ್ವೇ ತಂಡ ಸರ್ವೇ ನಡೆಸುತಿತ್ತು. ಆದರೆ ಇದರ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿರಲಿಲ್ಲ. ಇದನ್ನು ಅರಿತ ಗ್ರಾಮಸ್ಥರು, ಈಗಾಗಲೇ ಸಾಧಕ ಭಾಧಕಗಳ ಚರ್ಚೆ ನಡೆಸದೆ ಘಟಕದ ಯಾವುದೇ ಚಟುವಟಿಕೆಗಳು ಆರಂಭಿಸಬಾರದು ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ. ಆದರೂ ಗ್ರಾಮಸ್ಥರ ಗಮನಕ್ಕೆ ತರದೆ ಸರ್ವೆ ಕಾರ್ಯಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಗ್ರಾಮಸ್ಥರು, ಜನಜಾಗೃತಿ ಸಮಿತಿ, ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ಸರ್ವೆಗೆ ತಡೆಯೊಡ್ಡಿದರು.
1ನೇ ಹಂತದ ಯೋಜನೆ ಸಂದರ್ಭದಲ್ಲಿ ಬಂಡೆ ಸ್ಫೋಟದಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ಇಲಾಖೆಗಳು ಜಂಟಿ ಸರ್ವೆ ಮಾಡಿ ನೀಡಿದ ವರದಿಯಂತೆ ಸುಮಾರು 120 ಮನೆಗಳಿಗೆ 1ಕೋಟಿಯಷ್ಟು ಪರಿಹಾರ ಮೊತ್ತ ವಿತರಿಸಲು ಬಾಕಿಯಿದೆ. ಅದಲ್ಲದೆ ಆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಾರ್ಮಿಕರ ಇನ್ನಿತರ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಯೋಜನೆಯ ಸರ್ವೇಯನ್ನು ತಡೆದಿರುವುದರಿಂದ ಎಚ್ಚೆತ್ತ ಜಿಲ್ಲಾಡಳಿತ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಮಧ್ಯಾಹ್ನ ಸಭೆ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು, ಜನಜಾಗೃತಿ ಸಮಿತಿ ಅಧ್ಯಕ್ಷರು, ಜನಪ್ರತಿನಿಧಿಗಳು ಭಾಗವಹಿಸಿದರು. ಜಿಲ್ಲಾಧಿಕಾರಿ ಜಗದೀಶ್ ಇದೊಂದು ಪ್ರಾಥಮಿಕ ಸರ್ವೇಯಾಗಿದ್ದು, ಪರಿಹಾರ ಮೊತ್ತದ ಬಗ್ಗೆ ಹಾಗೂ ಯೋಜನೆಯ ಸಾಧಕ ಬಾಧಕದ ವಿಸ್ತಾರವಾದ ಚರ್ಚೆಯನ್ನು ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪಾ ಜಿ ಸುವರ್ಣ, ತಾಲ್ಲೂಕು ಪಂಚಾಯತ್ ಸದಸ್ಯೆ ಶಶಿಪ್ರಭಾ ಶೆಟ್ಟಿ, ಕಾಪು ಪುರಸಭೆ ಸದಸ್ಯ ಅರುಣ್ ಶೆಟ್ಟಿ ಪಾದೂರು ಜನಜಾಗೃತಿ ಸಮಿತಿ ಅಧ್ಯಕ್ಷರು ಪಾದೂರು-ಕಳತ್ತೂರು, ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ರಾವ್ , ಮಜೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಹನಾ ತಂತ್ರಿ, ಪ್ರಸಾದ್ ಶೆಟ್ಟಿ ವಳದೂರು, ಗಣೇಶ್ ಶೆಟ್ಟಿ ಹೇರೂರು, ಸುರೇಂದ್ರ ಕುಮಾರ್, ಮೇಬಲ್ ಕೋರ್ಡ, ಶಾಲಿನಿ ಕೋರ್ಡ, ಪ್ರಶಾಂತ್ ರಾವ್, ಮುಖೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಸತೀಶ್ ಶೆಟ್ಟಿ ವಳದೂರು, ರಾಘು ಆಚಾರ್ಯ, ರಿಚರ್ಡ್ ಕೋರ್ಡ, ಡಯಾನ ಸಲ್ಡಾನ, ಐಡಾ ಪಿಂಟೊ , ದಿವಾಕರ ಆಚಾರ್ಯ ಮತ್ತು ಇನ್ನಿತರ ಸ್ಥಳಿಯರು ಉಪಸ್ಥಿತರಿದ್ದರು.