ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ 9ನೆ ರಕ್ತದಾನ ಶಿಬಿರ
ಮಂಗಳೂರು, ಅ. 13: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್ಐಎಫ್) ವತಿಯಿಂದ ಮಂಗಳೂರಿನ ಕೆಎಂಸಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ 9ನೆ ರಕ್ತದಾನ ಶಿಬಿರವು ಯುನಿಟಿ ಆಸ್ಪತ್ರೆಯ ಬಳಿಯ ಎಚ್ಇಸಿಸಿ ಯಲ್ಲಿ ರವಿವಾರ ಬೆಳಗ್ಗೆ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಮಸ್ಜಿದುಲ್-ಎಹ್ಸಾನ್ ಇಮಾಮ್ ಮೌಲಾನಾ ಅಲ್ತಾಫ್ ಪವಿತ್ರ ಕುರ್ಆನ್ನ ವಚನಗಳನ್ನು ಪಠಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ಎಚ್ಇಸಿಸಿ ಟ್ರಸ್ಟಿ ಅಬ್ದುಲ್ ರಝಾಕ್, ಇಂಡಿಯನ್ ಡಿಸೈನ್ ಸ್ಕೂಲ್ ಪ್ರಾಂಶುಪಾಲರಾದ ಆರ್ಕಿಟೆಕ್ಟ್ ರಾಮನಾಥ್ ನಾಯಕ್, ಎಚ್ಐಎಫ್ ಮಾಜಿ ಅಧ್ಯಕ್ಷ ನಾಝಿಮ್ ಎಸ್ಎಸ್ ಮತ್ತು ಕೆ.ಎಂ.ಸಿ. ಆಸ್ಪತ್ರೆಯ ಪ್ರೊ. ಡಾ. ಕೆ.ಬಿ. ವತ್ಸಲಾ ಉಪಸ್ಥಿತರಿದ್ದರು.
ಮುಹಮ್ಮದ್ ರಿಝ್ವಾನ್ ಸ್ವಾಗತಿಸಿ, ಮುಖ್ಯ ಭಾಷಣ ಮಾಡಿದರು. ಡಾ. ವತ್ಸಲಾ ಅವರು ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಎಚ್ಐಎಫ್ ಆಯೋಜಿಸಿದ್ದ ಎಲ್ಲಾ ಒಂಬತ್ತು ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಿದ್ದಕ್ಕಾಗಿ ಐವರು ದಾನಿಗಳಾದ ವಿಜಯ್ ಕರ್ನಾಟಕ ಪ್ರಧಾನ ವರದಿಗಾರ ಮೊಹಮ್ಮದ್ ಆರಿಫ್, ಎಕೆ ಗ್ರೂಪಿನ ಹಿರಿಯ ತಂತ್ರಜ್ಞ ಪುರುಷೋತ್ತಮ ಗಟ್ಟಿ, ವಕೀಲರಾದ ತೌಸೀಫ್ ಅಹ್ಮದ್, ಶಾಝ್ ಅಹ್ಮದ್ ಎಕೆ ಮತ್ತು ಬೃಂದಾವನ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
''ಸಂಗ್ರಹಿಸಿದ ರಕ್ತ ಘಟಕಗಳನ್ನು ಕೆಎಂಸಿ ಬ್ಲಡ್ ಬ್ಯಾಂಕ್ನಲ್ಲಿ ಇಡಲಾಗುವುದು ಮತ್ತು ಜನರಿಗೆ ರಕ್ತದ ಘಟಕಗಳು ಬೇಕಾದಾಗ ಎಚ್ಐಎಫ್ನೊಂದಿಗೆ ಸಂಪರ್ಕ ಸಾಧಿಸಬಹುದು'' ಎಂದು 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ನಾಝಿಮ್ ಎಕೆ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಎಚ್ಐಎಫ್ ಕಚೇರಿಯ ಮೊಬೈಲ್ ಸಂಖ್ಯೆ +916366296133 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಶಾಝ್ ಅಹ್ಮದ್ ಎ.ಕೆ ವಂದಿಸಿದರು. ರಕ್ತದಾನ ಶಿಬಿರವು ಇಂದು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳಲಿದೆ.