ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು
ಕಾಪು, ಅ.13: ಉದ್ಯಾವರ ಪಡುಕೆರೆಯ ಶ್ರೀರಾಮ ಭಜನಾ ಮಂದಿರ ಹತ್ತಿರ ಸಮುದ್ರದಲ್ಲಿ ಅ.12ರಂದು ರಾತ್ರಿ ವೇಳೆ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೊಡವೂರು ಪಡ್ಲಾನೆರ್ಗಿಯ ಕೆ.ವಿ ಕೋಟ್ಯಾನ್ ಎಂಬವರ ಮಗ ನಿತ್ಯಾನಂದ(42) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ಹಾಗೂ ಕೋಸ್ಟಲ್ ಸೀ ಫುಡ್ ಫ್ಯಾಕ್ಟರಿಯಲ್ಲಿ ಮೀನು ಕಟ್ಟಿಂಗ್ ಕಲಸ ಮಾಡಿಕೊಂಡಿದ್ದು ಅ.12ರಂದು ಬೆಳಿಗ್ಗೆ ಮನೆಯಿಂದ ಫ್ಯಾಕ್ಟರಿಗೆ ಹೋಗಿ ಚಿಪ್ಪುಬಲೆಯಲ್ಲಿ ಮೀನುಗಾರಿಕೆ ಮಾಡಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದರು.
ಇವರ ಮೃತದೇಹ ಅ.13ರಂದು ಬೆಳಗ್ಗೆ 8ಗಂಟೆಗೆ ರಾಮ ಭಜನಾ ಮಂದಿರ ಹತ್ತಿರ ಸಮುದ್ರ ಬದಿಯಲ್ಲಿ ಪತ್ತೆಯಾಗಿದ್ದು, ಇವರು ಸಮುದ್ರದ ಅಲೆಗೆ ತಡೆಗೋಡೆ ಕಟ್ಟಿದ ಸ್ಥಳದಲ್ಲಿ ಚಿಪ್ಪುಬಲೆಯಿಂದ ಮೀನುಗಾರಿಕೆ ಮಾಡುವಾಗ ಸಮುದ್ರ ಅಲೆಯಿಂದ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರ ಬಹುದು ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.