ಪಡುಬಿದ್ರಿ: 'ಟ್ರಸರ್ ಹಂಟ್ - 2019' ಚೇತನ್-ಪ್ರಜ್ವಲ್ ಜೋಡಿಗೆ ಪ್ರಶಸ್ತಿ
ಪಡುಬಿದ್ರಿ: ಟ್ರಸರ್ಸ್ ಪಡುಬಿದ್ರಿ ಆಯೋಜಿಸಿದ ದ್ವಿಚಕ್ರ ವಾಹನಗಳಲ್ಲಿ ನಿಧಿ ಶೋಧನದಲ್ಲಿ ಚೇತನ್-ಪ್ರಜ್ವಲ್ ಜೋಡಿ ಟ್ರಸರ್ ಹಂಟ್ - 2019 ಪ್ರಶಸ್ತಿ ಗಳಿಸಿತು.
ಪಡುಬಿದ್ರಿ ಬೀಚ್ನ ಸಾಗರ್ ವಿದ್ಯಾಮಂದಿರ ಶಾಲೆಯ ಮೈದಾನದಿಂದ ಮೀನುಗಾರಿಕಾ ರಸ್ತೆಯ ಮೂಲಕ ಎರ್ಮಾಳು, ಉಚ್ಚಿಲ, ಪಣಿಯೂರು, ಬೆಳಪು, ಅದಮಾರು, ಮುದರಂಗಡಿ, ಯುಪಿಸಿಎಲ್, ನಂದಿಕೂರು, ಕಂಚಿನಡ್ಕ ಮಿಂಚಿನ ಬಾವಿ, ಹಾಲಿನ ಡೈರಿ, ಪಡುಹಿತ್ಲು ಮೂಲಕ ಪಡುಬಿದ್ರಿ ಸಾಗರ್ ವಿದ್ಯಾ ಮಂದಿರದಲ್ಲಿ ಸಮಾಪ್ತಿಗೊಂಡಿತು. ರ್ಯಾಲಿಯು ಒಟ್ಟು 25 ಕಿಮೀ ಕ್ರಮಿಸಿತು.
ದ್ವಿತೀಯ ಪ್ರಶಸ್ತಿ ಸಂದೀಪ್-ಉಮೇಶ್ ಜೋಡಿ, ತೃತೀಯ ಪ್ರಶಸ್ತಿಯನ್ನು ಪ್ರದೀಪ್ ಆಚಾರ್ಯ-ಅನುಗ್ರಹ ಜೋಡಿ ಹಾಗೂ ಸಮಾಧಾನಕರ ಬಹುಮಾನವನ್ನು ಸುರೇಶ್ -ಯೋಗೀಶ್ ಪಡೆದುಕೊಂಡಿತು.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಸಹಿತ ವಾಹನದ ಎಲ್ಲಾ ದಾಖಲೆಗಳನ್ನು ಸುಸ್ಥಿತಿಯಲ್ಲಿಡಬೇಕಾಗಿದೆ. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವ ಎಲ್ಲಾ ತಂಡಗಳ ದಾಖಲೆಗಳನ್ನು ಕ್ರಮಬದ್ಧವಾಗಿ ಪರಿಶೀಲಿಸಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಪಡುಬಿದ್ರಿ ಪ್ರೊಬಶನರಿ ಎಸ್ಐ ಸದಾನಂದ ರಾ ಗವರೋಜಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಸ್ತೆ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು ಎಂದು ರಸ್ತೆ ಸುರಕ್ಷತೆಯ ಬಗ್ಗೆ ವಿವರಿಸಿದರು.
ಸಾಗರ್ ವಿದ್ಯಾಮಂದಿರ ಸಂಚಾಲಕ ಸುಕುಮಾರ್ ಶ್ರೀಯಾನ್, ಪಡುಬಿದ್ರಿ ಗ್ರಾ.ಪಂ. ಸದಸ್ಯ ಅಶೋಕ್ ಪಡುಬಿದ್ರಿ, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಗಂಗಾಧರ ಸಾಲ್ಯಾನ್, ಸಂಘಟಕರಾದ ಪ್ರದೀಪ್ ರಾಜ್, ಆಲೆನ್ ಸಾಲ್ಯಾನ್ ಉಪಸ್ಥಿತರಿದ್ದರು. ಸುಧಾಕರ ಕೆ. ಕಾರ್ಯಕ್ರಮ ನಿರ್ವಹಿಸಿದರು.