ಉದ್ಯಾವರ: ಯುಎಫ್ಸಿ ಮಾತುಕತೆ-2019 ಬಿಡುಗಡೆ
ಉದ್ಯಾವರ, ಅ.14 ಇಲ್ಲಿನ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್ ಸರ್ಕಲ್ನ 2018-19ನೇ ಸಾಲಿನ ಚಟುವಟಿಕೆಗಳ ಕಿರು ಹೊತ್ತಗೆ ಯುಎಫ್ಸಿ ಮಾತುಕತೆ-2019ನ್ನು ಸಂಸ್ಥೆಯ 46ನೇ ವಾರ್ಷಿಕ ಸಭೆಯ ಸಂರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಉದ್ಯಾವರ ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ರಿಯಾಝ್ ಪಳ್ಳಿ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ನಿರಂತರ 45 ವರ್ಷಗಳಿಂದ ಜನಪರ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ತನ್ನ ಚಟುವಟಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವುದರಿಂದ ಸಂಸ್ಥೆಯ ಕೆಲಸ ಕಾರ್ಯಗಳು ಸಾರ್ವಜನಿಕರ ಗಮನಕ್ಕೆ ಬರುವಂತಾಗಿದೆ. ಇದರಿಂದ 2016ರಲ್ಲಿ ರಾಜ್ಯ ಮಟ್ಟದ ಸಾಲು ಮರ ತಿಮ್ಮಕ್ಕ ಪ್ರಶಸ್ತಿ ಮತ್ತು 2017ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂಸ್ಥೆಗೆ ದೊರಕುವಂತಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ತಿಲಕ್ರಾಜ್ ಸಾಲ್ಯಾನ್ ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಈ ಕಿರುಹೊತ್ತಿಗೆ ಮಹತ್ತರ ಪಾತ್ರ ವಹಿಸುತ್ತಿದೆ ಮತ್ತು ಸಂಸ್ಥೆಯ ಜನಪರ ಕೆಲಸಕ್ಕೊಂದು ಶಕ್ತಿ ಬರುತ್ತದೆ ಎಂದರು.
ಅತಿಥಿಗಳಾಗಿ ಉದ್ಯಾವರ ಗ್ರಾಪಂನ ಅಧ್ಯಕ್ಷೆ ಸುಗಂಧಿ ಶೇಖರ್ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್, ಹಿರಿಯ ಸದಸ್ಯರಾದ ರಮೇಶ್ ಕುಮಾರ್ ಉದ್ಯಾವರ ಮತುತಿ ಶೇಖರ್ ಕೆ.ಕೋಟ್ಯಾನ್ ಮಾತನಾಡಿದರು.
ವೇದಿಕೆಯಲ್ಲಿ ನಿರ್ದೇಶಕರಾದ ಚಂದ್ರಾವತಿ ಭಂಡಾರಿ, ಶರತ್ ಕುಮಾರ್, ಯು. ಪಧ್ಮನಾಭ ಕಾಮತ್, ಕೋಶಾಧಿಕಾರಿ ಸೋಮಶೇಖರ್ ಸುರತ್ಕಲ್ ಮತ್ತು ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು.