ನೀರು ಕುಡಿಯಲು ಎಚ್ಚರಿಸುವ ‘ವಾಟರ್ ಬೆಲ್’: ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ವಿನೂತನ ಯೋಜನೆ
ಉಪ್ಪಿನಂಗಡಿ, ಅ.19: ಜೀವಜಲದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದರೊಂದಿಗೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಆಯಾಯ ಸಮಯಕ್ಕೆ ಶುದ್ಧ ನೀರನ್ನು ಕುಡಿಯಲೇಬೇಕು ಎಂಬ ಉದ್ದೇಶದಿಂದ ಇಂದ್ರಪ್ರಸ್ಥ ವಿದ್ಯಾಲಯವು ‘ವಾಟರ್ ಬೆಲ್’ ಬಾರಿಸುವ ಮೂಲಕ ವಿನೂತನ ಯೋಜನೆ ಆರಂಭಿಸಿದೆ.
ಮಕ್ಕಳು ಶಾಲೆಗೆ ಬಂದರೆ ನೀರು ಕುಡಿಯುವುದೇ ಕಡಿಮೆ. ನೀರಿನ ಬಾಟಲಿ ತಂದರೂ ಅದನ್ನು ಹಾಗೆಯೇ ಮನೆಗೆ ಕೊಂಡು ಹೋಗುವುದೇ ಹೆಚ್ಚು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಕಾಲದಲ್ಲಿ ನೀರು ಕುಡಿಯುವಂತೆ ಪ್ರೇರೇಪಿಸಲು ಇಂದ್ರಪ್ರಸ್ಥ ಶಾಲಾಡಳಿತ ಮಂಡಳಿ ಚಿಂತನೆ ನಡೆಸಿ, ವಿದ್ಯಾಲಯದಲ್ಲಿ ‘ವಾಟರ್ ಬೆಲ್’ಗೆ ಸಮಯ ನಿಗದಿಗೊಳಿಸಿದೆ. ಈ ‘ವಾಟರ್ ಬೆಲ್’ ಬಾರಿಸಿದ ತಕ್ಷಣ ತರಗತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರೊಂದಿಗೆ ಶಿಕ್ಷಕರು ಕೂಡಾ ಕಡ್ಡಾಯವಾಗಿ ನೀರು ಕುಡಿಯಲೇಬೇಕು. ತರಗತಿಯಲ್ಲಿರುವ ಶಿಕ್ಷಕರೇ ಈ ಸಂದರ್ಭ ಪ್ರತಿ ವಿದ್ಯಾರ್ಥಿಗಳ ಮೇಲೆ ಗಮನವಿಡುತ್ತಾರೆ. ಕುಡಿಯುವ ನೀರಿನ ಬಾಟಲಿ ಮಕ್ಕಳು ತಾರದಿದ್ದಲ್ಲಿ ಶಾಲೆಯಲ್ಲಿರುವ ಶುದ್ಧೀಕರಿಸಿದ ನೀರು ಕುಡಿಯಬೇಕು.
ಮಕ್ಕಳು ಆರೋಗ್ಯವಂತರಾಗಿರಬೇಕು. ಪಠ್ಯ- ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು ಎಂಬ ಆಶಯದಿಂದ ಇಂದ್ರಪ್ರಸ್ಥ ವಿದ್ಯಾಲಯ ಜಾರಿಗೆ ತಂದಿರುವ ಈ ವಿನೂತನ ಯೋಜನೆ ಮಕ್ಕಳ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.