ಯಕ್ಷಗಾನ ಶೃತಿಗೆ ಬಂತು ‘ಯಕ್ಷನಾದ’ ಮೊಬೈಲ್ ಅಪ್ಲಿಕೇಶನ್!
ಉಡುಪಿ, ಅ.19: ಇಂದಿನ ಮೊಬೈಲ್ ಯುಗದಲ್ಲಿ ಎಲ್ಲವೂ ಅಂಗೈಯಲ್ಲಿ ದೊರೆಯುತ್ತಿರುವಾಗ ಯಕ್ಷಲೋಕದ ಹಿಮ್ಮೇಳದ ಶೃತಿಗೆ ಮೊಬೈಲ್ ಅಪ್ಲಿಕೇಶನ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಹಿಂದೆ ಸಾಂಪ್ರದಾಯಿಕ ಹಾರ್ಮೋನಿಯಂ ಪೆಟ್ಟಿಗೆಯಿಂದ ಶ್ರುತಿಯನ್ನು ಕೈಯಲ್ಲೇ ಬೆಳಗಿನವರೆಗೆ ನುಡಿಸಬೇಕಿತ್ತು. ಕಾಲಕ್ರಮೇಣ ಇಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆಯನ್ನು ಉಪಯೋಗಿಸುತ್ತಿದ್ದು, ಈಗ ಬಹುತೇಕ ಭಾಗವತರು ಇದನ್ನು ಬಳಸುತ್ತಿದ್ದಾರೆ. ಈಗ ಯಾವುದೇ ಖರ್ಚಿಲ್ಲದೆ ಇದೇ ಶ್ರುತಿ ಯನ್ನು ಮೊಬೈಲ್ನಲ್ಲೇ ‘ಯಕ್ಷನಾದ’ ಎಂಬ ಅಪ್ಲಿಕೇಶನ್ ಮೂಲಕ ಸುಲಭದಲ್ಲಿ ನುಡಿಸಬಹುದಾಗಿದೆ.
ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮದ ಯಕ್ಷಪ್ರೇಮಿಗಳು ಈ ಅಪ್ಲಿಕೇಶನ್ನ್ನು ಅಭಿವೃದ್ಧಿಪಡಿಸಿದ್ದು ಪ್ಲೇ ಸ್ಟೋರ್ನಲ್ಲಿ ಬಿಡುಗಡೆಗೊಳಿಸಿ ದ್ದಾರೆ. ಇದು ಭಾಗವತರಿಗೆ ಚೌಕಿಪೂಜೆಯ ಸಂದರ್ಭದಲ್ಲಿ ಯಾವುದೇ ವಿದ್ಯುತ್ ಸಂಪರ್ಕದ ಅಗತ್ಯವಿಲ್ಲದೆ ಹಾಡಲು ಅನುವು ಮಾಡಿಕೊಡು ವುದಲ್ಲದೆ ಸ್ಪೀಕರಿಗೆ ಸಂಪರ್ಕ ಕಲ್ಪಿಸಿದರೆ ರಂಗಸ್ಥಳದಲ್ಲೂ ಶ್ರುತಿಪೆಟ್ಟಿಗೆಯ ರೀತಿಯಲ್ಲಿ ಇದನ್ನು ಬಳಸಬಹುದಾಗಿದೆ.
ಈ ಅಪ್ಲಿಕೇಶನ್ನಲ್ಲಿರುವ ಶ್ರುತಿಗಳು ಉಭಯ ತಿಟ್ಟುಗಳಿಗೂ ಅನ್ವಯಿಸು ವುದಲ್ಲದೆ ಶಾಸ್ತ್ರೀಯ ಸಂಗೀತಕ್ಕೂ ಬಳಸಬಹುದಾಗಿದೆ. ಆಂಡ್ರಾಯ್ಡ್ನ ಎಲ್ಲಾ ಆವೃತ್ತಿಗಳಲ್ಲೂ ಈ ಅಪ್ಲಿಕೇಶನ್ನ್ನು ಬಳಸಬಹುದಾಗಿದ್ದು, ಕಾಲಕಾಲಕ್ಕೆ ಇದರ ಅಪ್ಡೇಟ್ಗಳೂ ಬರಲಿವೆ.
‘ಯಕ್ಷನಾದ’ ಅಪ್ಲಿಕೇಶನ್ ಸಂಪೂರ್ಣ ಉಚಿತವಾಗಿದ್ದು, ಪ್ಲೇಸ್ಟೋರಿನಲ್ಲಿ ‘ಯಕ್ಷನಾದ’ ಎಂದು ಟೈಪ್ ಮಾಡಿ ಹುಡುಕಿದರೆ ಅಥವಾ - https://play.google.com/store/apps/details? id=com.lovoctech.yakshanaada- ಲಿಂಕ್ನಿಂದ ಡೌನ್ಲೋಡ್ ಮಾಡಿ ಕೊಳ್ಳಬಹುದು. ಯಕ್ಷಗಾನಾಸಕ್ತರು ಇದರ ಸದುಪಯೋಗ ಪಡೆದುಕೊಂಡು ಅಮೂಲ್ಯ ಸಲಹೆಗಳನ್ನು ಪ್ಲೇ ಸ್ಟೋರಿನಲ್ಲಿ ಹಂಚಿಕೊಳ್ಳುವಂತೆ ಶ್ರೀನಿವಾಸ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.