‘ಕೃಷಿಕ ಯೋದ್ಧ ಸಮುದಾಯ’ ಕೃತಿ ಬಿಡುಗಡೆ
ಉಡುಪಿ, ಅ. 19: ಲೇಖಕ ಬಿ.ಸಚ್ಚಿದಾನಂದ ಹೆಗ್ಡೆ ಅವರ ‘ಕೃಷಿ ಯೋದ್ಧ ಸಮುದಾಯ’ ಕೃತಿಯನ್ನು ಸುಹಾಸಂ ಸಂಘಟನೆಯ ವತಿಯಿಂದ ಹೊಟೇಲ್ ಕಿದಿಯೂರು ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಸಮಾರಂಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಡಿಜಿಎಂ ಎಂ.ಜಯರಾಮ ಶೆಟ್ಟಿ ಬಿಡುಗಡೆಗೊ ಳಿಸಿದರು.
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಭಾಷಾತಜ್ಞ ಹಾಗೂ ಸಂಶೋಧಕ ಡಾ.ಎನ್.ತಿರುಮಲೇಶ್ವರ ಭಟ್, ನಮಗೆ ಇತ್ತೀಚಿನ ಇತಿಹಾಸ ದೊಂದಿಗೆ, ಹಿಂದಿನ ಶತಮಾನದಲ್ಲಿ ನಮ್ಮ ಹಿರಿಯರು ಹೇಗೆ ಬದುಕಿದ್ದರು ಎಂಬ ವಿಷಯಗಳನ್ನು ಮುಂದಿನ ತಲೆಮಾರಿಗೆ ತಿಳಿಸುವುದೂ ಮುಖ್ಯವಾ ಗುತ್ತದೆ ಎಂದು ಅಭಿಪ್ರಾಯ ಪಟ್ಟರು.
‘ಯುದ್ಧ’ವನ್ನು ಮಾಡುವವರು ‘ಯೋದ್ಧ’ ಆಗಿರಬೇಕು. ಕೃಷಿ ಕಸುಬು ಮಾಡಿದವರು ಕೃಷಿಕ ಯೋದ್ಧರು ಎಂಬ ಅರ್ಥದಲ್ಲಿ ಕೃತಿ ಶೀರ್ಷಿಕೆಯನ್ನು ವಿಶ್ಲೇಷಿಸಿದ ಡಾ.ಎನ್.ಟಿ.ಭಟ್,ನಮ್ಮ ನಿಜಾನುಭವ ದಾಖಲಾಗಬೇಕು. ಇದು ಮುಂದಿನ ಪೀಳಿಗೆಗೆ ಅರಿವು ಕೊಡುತ್ತದೆ ಎಂದರು.
ಹಿರಿಯ ಸಾಹಿತಿ ಎನ್.ನಾರಾಯಣ ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದರು. ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಲೇಖಕ ಬಿ.ಸಚ್ಚಿದಾನಂದ ಹೆಗ್ಡೆ ಮತ್ತು ಸರಸ್ವತಿ ಎಸ್. ಹೆಗ್ಡೆ ದಂಪತಿಯನ್ನು ಅಭಿನಂದಿಸಲಾಯಿತು.
ಯಕ್ಷಗಾನ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅಭಿನಂದನ ಭಾಷಣ ಮಾಡಿದರು. ಪಳ್ಳಿ ಜಗದೀಶ ಹೆಗ್ಡೆ ಸ್ವಾಗತಿಸಿದರೆ ಗೌರವ ಹೆಗ್ಡೆ ವಂದಿಸಿದರು. ಸುಹಾಸಂ ಕಾರ್ಯದರ್ಶಿ ಎಚ್.ಗೋಪಾಲ ಭಟ್ ಪ್ರಸ್ತಾವನೆಗೈದರು. ಮಹಿಮಾ ಹೆಗ್ಡೆ, ಮೇಘನಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.