ಬೆಳ್ತಂಗಡಿಯಲ್ಲಿ ಸಿಐಟಿಯು, ದಸಂಸದಿಂದ ಧರಣಿ
ಬೆಳ್ತಂಗಡಿ, ಅ.22: ಋಣಮುಕ್ತರಾಗಿಸುವಂತೆ ಒತ್ತಾಯಿಸಿ ಸಿಐಟಿಯು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬೆಳ್ತಂಗಡಿ ಮಿನಿವಿಧಾನಸೌಧದ ಎದುರು ಮಂಗಳವಾರ ಧರಣಿ ನಡೆಯಿತು
ಧರಣಿಯನ್ನುದ್ದೇಶಿಸಿ ಮಾತನಾಡಿದ ಹೈಕೋರ್ಟ್ ನ್ಯಾಯವಾದಿ ಅನಂತ ನಾಯಕ್, ಹಲವು ಬ್ಯಾಂಕ್ ಗಳಿಗೆ ಜನ್ಮ ನೀಡಿದ ದ.ಕ. ಜಿಲ್ಲೆಯಲ್ಲಿ ಬಡವರು ಬಡ್ಡಿ ಮಾಫಿಯಾಕ್ಕೆ ಬಲಿಯಾಗುತ್ತಿರುವುದು ದುರಂತ. ಸರಕಾರಗಳು ಕೂಡಲೇ ಮೈಕ್ರೋ ಫೈನಾನ್ಸ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಬೇಕು. ಬಲವಂತದ ಸಾಲ ವಸೂಲಾತಿ ಹಾಗೂ ಮಿತಿಮೀರಿದ ಬಡ್ಡಿ ವಸೂಲಾತಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ಹೋರಾಟ ರಾಜ್ಯಾದ್ಯಂತ ವಿಸ್ತರಿಸಬೇಕಾಗಿದೆ. ಮಿತಿಮೀರಿದ ಬಡ್ಡಿ ವಸೂಲಾತಿಯಿಂದಾಗಿ ಬಡ ಮಹಿಳೆಯರು ಸಾಲ ಕಟ್ಟಲಾಗದೆ ಆತ್ಮಹತ್ಯೆಯ ಹಂತಕ್ಕೆವತಲುಪಿದ್ದಾರೆ. ಸರಕಾರಗಳು ಕೂಡಲೇ ಎಚ್ಚೆತ್ತುಕೊಂಡು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಹೋರಾಟದ ರೂವಾರಿ ಸಿಐಟಿಯು ಮುಖಂಡ ಬಿ.ಎಂ ಭಟ್ ಮಾತನಾಡಿ, ಬಲವಂತದ ಸಾಲ ವಸೂಲಾತಿ ನಿಲ್ಲುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮುಖಂಡರಾದ ಚಂದು ಎಲ್., ಬಿ.ಕೆ.ವಸಂತ್, ನೇಮಿರಾಜ ಕಿಲ್ಲೂರು, ಸಿಐಟಿಯು ಅಧ್ಯಕ್ಷ ಮಂಜುನಾಥ್ ಎಲ್. ಹಾಗೂ ಇತರರು ಉಪಸ್ಥಿತರಿದ್ದರು.