ಫೇಸ್ಬುಕ್ನಲ್ಲಿ ತುಳು ದೈವಾರಾಧನೆ ನಿಂದನೆ: ಆರೋಪಿಗೆ ಜಾಮೀನು
ಮಂಗಳೂರು, ಅ.30:ಫೇಸ್ಬುಕ್ನಲ್ಲಿ ತುಳು ದೈವಾರಾಧನೆ ಬಗ್ಗೆ ನಿಂದಿಸಿದ ಆರೋಪದ ಮೇರೆಗೆ ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸರಿಂದ ಬಂಧಿಸಲ್ಪಟ್ಟ ಉತ್ತರ ಕನ್ನಡ ಮೂಲದ ಆರೋಪಿ ಮುದ್ದುರಾಜ ಕನ್ನಡಿಗ ಯಾನೆ ಮುದ್ದುರಾಜ ದೇಸಾಯಿಗೌಡನಿಗೆ ಜಾಮೀನು ನೀಡಲಾಗಿದೆ.
ಈತ ಫೇಸ್ಬುಕ್ನಲ್ಲಿ ‘ಟ್ರೋಲ್ ಹೂ ಟ್ರೋಲ್ ಕನ್ನಡಿಗ’ ಎಂಬ ಪೇಜ್ ತೆರೆದು ಅದರಲ್ಲಿ ತುಳುನಾಡಿನ ದೈವಾರಾಧನೆಯ ಬಗ್ಗೆ ನಿಂದಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಅರ್ನಾಲ್ಡ್ ತುಳುವೆ ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ‘ಆರೋಪಿಯು ಭಕ್ತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಕಾನೂನು ಕ್ರಮ ಜರಗಿಸುವಂತೆ’ ಎಂದು ಒತ್ತಾಯಿಸಿದ್ದರು. ಅದರಂತೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ನ್ಯಾಯಾಂಗ ಸೆರೆ ವಿಧಿಸಿತ್ತು.
ಆರೋಪಿ ಪರ ವಾದ ಮಂಡಿಸಿದ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ‘ಆರೋಪಿಯು ಆ ಗ್ರೂಪಿನ ಅಡ್ಮಿನ್ ಆಗಿರಲಿಲ್ಲ. ಅಲ್ಲದೆ ಆತ ಆ ಫೋಟೋಗೆ ಯಾವುದೇ ಕಮೆಂಟ್ ಮಾಡಿದ್ದಾನೆಂಬುದಕ್ಕೆ ದಾಖಲೆಯನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಿಲ್ಲ. ನ್ಯಾಯಾಲಯ ಹೇಳಿದ್ದರೂ ಅದರ ಸ್ಕ್ರೀನ್ಶಾಟ್ ಕೂಡ ಸಲ್ಲಿಸಿಲ್ಲ. ಗ್ರೂಪ್ ಅಡ್ಮಿನ್ನನ್ನು ಪೊಲೀಸರು ಇನ್ನೂ ಬಂದಿಸಿಲ್ಲ. ಟ್ಯಾಗ್ ಆದವನನ್ನು ಬಲಿಪಶು ಮಾಡಿದ್ದಾರೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದಿದ್ದರು.
ಈ ಅಂಶಗಳನ್ನೆಲ್ಲ ಪರಿಗಣಿಸಿದ ಎರಡನೆ ಜೆಎಂಎಫ್ಸಿ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.