ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷರ ವಿರುದ್ಧ ಅಸಮಾಧಾನ : ಸ್ಥಾಯಿ ಸಮಿತಿ ಅಧ್ಯಕ್ಷ ರಾಜೀನಾಮೆ
ಮಂಜೇಶ್ವರ: ಗ್ರಾ.ಪಂ.ಅಧ್ಯಕ್ಷ ಅಝೀಝ್ ಹಾಜಿ ವಿರುದ್ಧ ಅಸಮಾಧಾನ ಬುಗಿಲೆದ್ದಿದ್ದು, ಪಂಚಾಯತ್ ಅಧ್ಯಕ್ಷರ ಆಡಳಿತದ ವಿರುದ್ಧ ಅಸಮಧಾನಗೊಂಡ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ಅಧಿಕೃತರಿಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಸ್ಲಿಂ ಲೀಗ್ ಒಪ್ಪಂದದಂತೆ ಎರಡೂವರೆ ವರ್ಷದ ಬಳಿಕ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕಿತ್ತು. ಆದರೆ ಅಝೀಝ್ ಹಾಜಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಲಿಲ್ಲ ಎಂದು ತಿಳಿದುಬಂದಿದ್ದು, . ಈ ಸಂಬಂಧ ಪಂಚಾಯತಿನ ಲೀಗ್ ಸದಸ್ಯರ ಮಧ್ಯೆ ಶೀತಲ ಸಮರ ನಡೆದಿತ್ತು. ಆದರೆ ಲೋಕಸಭೆ ಹಾಗೂ ಅಸೆಂಬ್ಲಿ ಉಪಚುನಾವಣೆ ಬಂದ ಹಿನ್ನೆಲೆಯಲ್ಲಿ ಯಾವುದೇ ಬಂಡಾಯವೆದ್ದಿರಲಿಲ್ಲ. ಇದೀಗ ಚುನಾವಣೆಯ ಬಳಿಕ ಅಸಮಾಧಾನದ ಕಟ್ಟೆಯೊಡೆದಿದ್ದು, ರಾಜೀನಾಮೆಗೆ ತಲುಪಿದೆ. ಪಂಚಾಯತ್ ಮುಸ್ಲಿಂ ಲೀಗ್ ಸಭೆಯಲ್ಲಿಯೂ ಇನ್ನೋರ್ವ ಸ್ಥಾಯೀ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರ ನಡುವೆ ವಾಕ್ಸಮರ ತಾರಕಕ್ಕೇರಿತ್ತು. ಪಂಚಾಯತಿನ ಭ್ರಷ್ಟಾಚಾರ ತಾಂಡವಾಡುತ್ತಿದೆಯೆಂದು ಲೀಗ್ ಸದಸ್ಯರೇ ಪಂಚಾಯತ್ ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿದ್ದು, ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.